ನಡು ರಸ್ತೆಯಲ್ಲಿ ಜನಸಮೂಹದ ನಡುವೆಯೇ ಮೂವರು ಯುವಕರಿಗೆ ಪೊಲೀಸರು ಲಾಠಿ ಪ್ರಹಾರ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಅಧಿಕಾರಿ ಅವರ ಪಾದಗಳಿಗೆ ಲಾಠಿಯಿಂದ ಹೊಡೆಯುವುದನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ, ಮತ್ತೊಬ್ಬ ಪೊಲೀಸ್ ಅಧಿಕಾರಿ ಒಬ್ಬ ವ್ಯಕ್ತಿಗೆ ಹೊಡೆಯುತ್ತಿರುವಾಗ ಅವನ ಮೊಣಕಾಲುಗಳ ಮೇಲೆ ಕಾಲಿಡುವುದನ್ನು ಕೂಡ ವೀಡಿಯೊದಲ್ಲಿ ಕಾಣಬಹುದು. ಬೈಕ್ ಸ್ಟಂಟ್ ಮಾಡಿದ್ದಕ್ಕಾಗಿ ಯುವಕರಿಗೆ ಶಿಕ್ಷೆ ವಿಧಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬೈಕ್ ವೀಲಿಂಗ್ ಮಾಡುತ್ತಿದ್ದವರಿಗೆ ಆಂಧ್ರ ಪೊಲೀಸ್ ಬಿಸಿ ಬಿಸಿ ಕಜ್ಜಾಯ ಕೊಡ್ತಿದ್ದಾರೆ. ಕರ್ನಾಟಕ ಪೊಲೀಸರು ಸಹ ಬೈಕ್ ವೀಲಿಂಗ್ ಮಾಡೋರಿಗೆ ಇದೆ ಶಿಕ್ಷೆ ಕೊಡ್ಲಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಹೇಳಿಕೆಗಳು ಸುಳ್ಳು ಎಂದು ನ್ಯೂಸ್ಮೀಟರ್ ಕಂಡುಕೊಂಡಿದೆ. ಪೊಲೀಸ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಆಂಧ್ರಪ್ರದೇಶ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಕೀವರ್ಡ್ ಹುಡುಕಾಟವನ್ನು ಬಳಸಿಕೊಂಡು, ಮೇ 27 ರಂದು ಪ್ರಕಟವಾದ ಟೈಮ್ಸ್ ಆಫ್ಇಂಡಿಯಾ ವರದಿಯನ್ನು ನಾವು ಕಂಡುಕೊಂಡೆವು. ‘ಆಂಧ್ರಪ್ರದೇಶದ ಪೊಲೀಸರು ಕಾನ್ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ರಸ್ತೆಯಲ್ಲಿ 3 ಜನರನ್ನು ಹಿಡಿದು ಕೋಲುಗಳಿಂದ ಹೊಡೆದರು' ಎಂದು ಬರೆಯಲಾಗಿದೆ. ಈ ವರದಿಯು ವೈರಲ್ ವೀಡಿಯೊದ ಸ್ಕ್ರೀನ್ಶಾಟ್ ಅನ್ನು ಬಳಸಿದೆ.
ತೆನಾಲಿ ಟೂ ಟೌನ್ ಪೊಲೀಸ್ ಅಧಿಕಾರಿ ರಾಮುಲು ನಾಯಕ್ ಅವರನ್ನು ಉಲ್ಲೇಖಿಸಿ, TOI ಬರೆದಿರುವ ಪ್ರಕಾರ, "ಈ ಘಟನೆ ಸುಮಾರು ಒಂದು ತಿಂಗಳ ಹಿಂದೆ ನಡೆದಿದ್ದು, ಮೂವರು ಗಾಂಜಾ ಸೇವನೆಯ ಪ್ರಭಾವದಲ್ಲಿ ಕಾನ್ಸ್ಟೆಬಲ್ ಕಣ್ಣ ಚಿರಂಜೀವಿ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ನಂತರ ಕಾನ್ಸ್ಟೆಬಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ."
ಆರೋಪಿಗಳನ್ನು ಚೆಬ್ರೋಲು ಜಾನ್ ವಿಕ್ಟರ್ (25), ಶೇಕ್ ಬಾಬುಲಾಲ್ (21) ಮತ್ತು ದೋಮಾ ರಾಕೇಶ್ (25) ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿದ ಬಹಳ ಸಮಯದ ನಂತರ ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
‘ತೆನಾಲಿ ಪೊಲೀಸ್: ಪೊಲೀಸರು ರಸ್ತೆಯಲ್ಲಿ ರೌಡಿ ಶೀಟರ್ಗಳಿಗೆ ಶಿಕ್ಷೆ' ಎಂಬ ಶೀರ್ಷಿಕೆಯಡಿಯಲ್ಲಿ ಎಬಿಎನ್ ಆಂಧ್ರ ಜ್ಯೋತಿ ಮೇ 26 ರಂದು ವರದಿ ಪ್ರಕಟಿಸಿತು. ವರದಿಯು ವೈರಲ್ ವೀಡಿಯೊದ ಸ್ಕ್ರೀನ್ಶಾಟ್ ಅನ್ನು ಸಹ ಬಳಸಿದೆ. ವರದಿಯಲ್ಲಿ ಆರೋಪಿಗಳು ಏಪ್ರಿಲ್ 25 ರಂದು ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅವರನ್ನು ಏಪ್ರಿಲ್ 26 ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಡಿಎಸ್ಪಿ ಜನಾರ್ದನ ರಾವ್, ಮೂವರು ವ್ಯಕ್ತಿಗಳ ವಿರುದ್ಧ ರೌಡಿ ಶೀಟ್ ಇದೆ ಎಂದು ಹೇಳಿದ್ದಾರೆ. ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಮೂವರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ನ್ಯೂಸ್ 18 ವರದಿ ತಿಳಿಸಿದೆ.
ಹೀಗಾಗಿ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಮೂವರು ವ್ಯಕ್ತಿಗಳ ಮೇಲೆ ಆಂಧ್ರ ಪೊಲೀಸರು ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.