ಹರಿಯಾಣ ಕಾಂಗ್ರೆಸ್ ಕಾರ್ಯಕರ್ತೆ 22 ವರ್ಷದ ಹಿಮಾನಿ ನರ್ವಾಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಪೋಸ್ಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇವರ ಶವವು ಹರಿಯಾಣದ ರೋಹ್ಟಕ್-ದೆಹಲಿ ಹೆದ್ದಾರಿಯಲ್ಲಿರುವ ಸಂಪ್ಲಾ ಬಸ್ ನಿಲ್ದಾಣದ ಬಳಿ ಸೂಟ್ಕೇಸ್ನಲ್ಲಿ ಪತ್ತೆಯಾಗಿತ್ತು. ಸದ್ಯ ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ಹಿಮಾನಿ ನರ್ವಾಲ್ ಅವರನ್ನು ಮುಸ್ಲಿಮರು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಮಾರ್ಚ್ 2, 2025 ರಂದು ಪೋಸ್ಟ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ, ‘‘ರಾಹುಲ್ ಗಾಂಧಿಯವರ ಯಾತ್ರೆಯಲ್ಲಿ ಭಾಗವಹಿಸಿದ್ದ ಹರಿಯಾಣದ ಕಾಂಗ್ರೆಸ್ ಯುವ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರನ್ನು ಜಿಹಾದುಗ್ರವಾದಿಗಳು ಕತ್ತು ಹಿಸುಕಿ ಸೂಟ್ಕೇಸ್ನಲ್ಲಿ ತುಂಬಿ ರೋಹ್ಟಕ್-ದೆಹಲಿ ಹೆದ್ದಾರಿಯ ಬದಿಯಲ್ಲಿ ಎಸೆದು ಹೋಗಿದ್ದಾರೆ. ಅವರು ನೀವು ಯಾವ ಪಕ್ಷ ಯಾವ ಸಿದ್ಧಾಂತ ಅನ್ನೋದು ನೋಡೋದಿಲ್ಲ. ನೀನು ಕಾಫೀರ್ ಹೌದೋ ಅಲ್ಲವೋ ಎರಡೇ ನೋಡೋದು. ನಾಳೆಯ ದಿನ ಅವರು ನನ್ನ ಬ್ರದರ್ಸ್ ಅಂದವನನ್ನೂ ಬಿಡೋದಿಲ್ಲ, ಈ ವಿಷಯ ಅರ್ಥವಾಗುವವರಿಗೆ ಮಾತ್ರ’’ ಎಂದು ಹೇಳಿಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಮಾಡಲಾಗುತ್ತಿದೆ ಎಂಬುದು ಕಂಡುಬಂದಿದೆ. ಪೊಲೀಸರು ಆರೋಪಿಯನ್ನು ಸಚಿನ್ ಎಂದು ಗುರುತಿಸಿದ್ದಾರೆ. ಇದರಲ್ಲಿ ಯಾವುದೇ ಕೋಮುಕೋನವಿಲ್ಲ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ಕೀವರ್ಡ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವರದಿಗಳು ನಮಗೆ ಕಂಡುಬಂದವು. ಟೈಮ್ಸ್ ಆಫ್ ಇಂಡಿಯಾ ಮಾರ್ಚ್3, 2025 ರಂದು ಪ್ರಕಟಿಸಿದ ವರದಿಯಲ್ಲಿ ‘‘ಹರ್ಯಾಣದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರನ್ನು ವೈರ್ಡ್ ಮೊಬೈಲ್ ಚಾರ್ಜರ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ ನಂತರ, ಮೃತದೇಹವನ್ನು ಹೊಂದಿರುವ ಕಪ್ಪು ಸೂಟ್ಕೇಸ್ ಅನ್ನು ಆರೋಪಿ ಸಚಿನ್ ಹೊತ್ತುಕೊಂಡು ಹೋಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಗಳನ್ನು ಅಧಿಕಾರಿಗಳು ಸೋಮವಾರ ಬಿಡುಗಡೆ ಮಾಡಿದ್ದಾರೆ. ಸೋಮವಾರದಂದು ಸಚಿನ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸಚಿನ್ ಮತ್ತು ಹಿಮಾನಿ ನಡುವಿನ ಹಣಕಾಸಿನ ವಿಷಯಗಳು ಕೊಲೆಯ ಹಿಂದಿನ ಉದ್ದೇಶ ಆಗಿರಬಹುದು ಎಂದು ಪೊಲೀಸರು ಸೂಚಿಸಿದ್ದಾರೆ’’ ಎಂದು ಹೇಳಲಾಗಿದೆ.
ಹಾಗೆಯೆ ಮಾರ್ಚ್ 3, 2025 ರಂದು ಹಿಂದೂಸ್ತಾನ್ ಟೈಮ್ಸ್ ಮತ್ತು ಲೈವ್ ಮಿಂಟ್ ವರದಿಯನ್ನು ಕಂಡುಕೊಂಡೆವು. ಈ ಮಾಧ್ಯಮಗಳ ಪ್ರಕಾರ, ‘‘ಶವ ಪತ್ತೆಯಾಗುತ್ತಿದ್ದಂತೆ, ಪೊಲೀಸರು ಜರ್ಜರ್ ಜಿಲ್ಲೆಯ ಮೊಬೈಲ್ ಫೋನ್ ಅಂಗಡಿ ಮಾಲೀಕ 30 ವರ್ಷದ ಸಚಿನ್ (ದಿಲ್ಲು ಎಂದೂ ಕರೆಯುತ್ತಾರೆ) ನರ್ವಾಲ್ ಅವರನ್ನು ಕೊಲೆ ಆರೋಪಿ ಎಂದು ಗುರುತಿಸಿ ಬಂಧಿಸಿದರು. ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಹೊಂದಿದ ನಂತರ ಸಚಿನ್ ಮತ್ತು ನರ್ವಾಲ್ ಸುಮಾರು 18 ತಿಂಗಳಿನಿಂದ ಪರಸ್ಪರ ಪರಿಚಿತರಾಗಿದ್ದರು. ರೋಹ್ಟಕ್ನ ವಿಜಯ್ ನಗರ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ಅವರು ಆಗಾಗ್ಗೆ ಭೇಟಿ ನೀಡುತ್ತಿದ್ದರು’’ ಎಂದು ಬರೆಯಲಾಗಿದೆ.
ಪೊಲೀಸರ ಪ್ರಕಾರ, ‘‘ಫೆಬ್ರವರಿ 27 ರಂದು ಸಚಿನ್ ನರ್ವಾಲ್ ಅವರ ಮನೆಗೆ ಭೇಟಿ ನೀಡಿದಾಗ, ಹಣಕಾಸಿನ ವಿಷಯವಾಗಿ ಜಗಳ ನಡೆದಿತ್ತು. ಆ ಕ್ಷಣದ ಸಿಟ್ಟಿನಲ್ಲಿ, ಮೊಬೈಲ್ ಫೋನ್ ಚಾರ್ಜರ್ ಕೇಬಲ್ ಬಳಸಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದನು. ನಂತರ ಆಕೆಯ ಆಭರಣಗಳು, ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ತೆಗೆದುಕೊಂಡು, ಆಕೆಯ ಶವವನ್ನು ಸೂಟ್ಕೇಸ್ನಲ್ಲಿ ಇರಿಸಿ, ಸಂಪ್ಲಾ ಬಸ್ ನಿಲ್ದಾಣದ ಬಳಿ ಎಸೆದಿದ್ದನು’’.
ಮಾರ್ಚ್ 4 ರ ಜಾಗರಣ್ ವರದಿಯು ಸಚಿನ್ ಅವರ ತಂದೆ ದೇವೇಂದರ್ ಎಂದು ಗುರುತಿಸಿದ್ದು, ಅವರಿಗೆ ಘಟನೆಯ ಬಗ್ಗೆ ತಿಳಿದಿರಲಿಲ್ಲ. ಸಚಿನ್ ವಿವಾಹಿತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಮತ್ತು ಅವರ ಪೋಷಕರಿಂದ ಪ್ರತ್ಯೇಕವಾಗಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.
ನ್ಯೂಸ್ ಮೀಟರ್ ಇಂಡಿಯಾ ಟುಡೇ ವರದಿಗಾರ ಅರವಿಂದ್ ಓಜಾ ಅವರೊಂದಿಗೆ ಮಾತನಾಡಿದ್ದು, ಆರೋಪಿಯ ಹೆಸರು ಸಚಿನ್ ಎಂದು ದೃಢಪಡಿಸಿದ ಅವರು ಈ ಪ್ರಕರಣದಲ್ಲಿ ಯಾವುದೇ ಕೋಮು ಕೋನವಿಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಹರಿಯಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಸ್ನೇಹಿತ ಸಚಿನ್ನನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಯಾವುದೇ ಕೋಮು ಕೋನವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.