Fact Check: ಅಂಗಾಂಗ ದಾನದ ಈ ಭಾವನಾತ್ಮಕ ವೀಡಿಯೊ ದಯಾಮರಣಕ್ಕೆ ಅನುಮತಿ ನೀಡಿದ ಹರೀಶ್ ರಾಣಾಗೆ ಸಂಬಂಧಿಸಿಲ್ಲ
ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು, ಹರೀಶ್ ರಾಣಾ ಅವರನ್ನು ಅಂತಿಮ ವಿದಾಯಕ್ಕಾಗಿ ನವದೆಹಲಿಯ ಏಮ್ಸ್ಗೆ ಕರೆದೊಯ್ಯುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
By - Vinay Bhat |
Claim:ಹರೀಶ್ ರಾಣಾ ಅವರನ್ನು ಅಂತಿಮ ವಿದಾಯಕ್ಕಾಗಿ ನವದೆಹಲಿಯ ಏಮ್ಸ್ಗೆ ಕರೆದೊಯ್ಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಈ ವೀಡಿಯೊ ಗುಜರಾತ್ನ ಸೂರತ್ನದ್ದಾಗಿದ್ದು, 45 ವರ್ಷದ ರೀತಾಬೆನ್ ಕೊರಾಟ್ ಅವರ ಮೆದುಳು ನಿಷ್ಕ್ರಿಯಗೊಂಡ ನಂತರ ಅವರ ಕುಟುಂಬ ಸದಸ್ಯರು ಅವರ ಅಂಗಾಂಗಗಳನ್ನು ದಾನ ಮಾಡಿದರು.
ಇತ್ತೀಚೆಗೆ, ಸುಪ್ರೀಂ ಕೋರ್ಟ್ ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ ಗಾಜಿಯಾಬಾದ್ನ ಹರೀಶ್ ರಾಣಾಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತು. ಇದು ಭಾರತದಲ್ಲಿ ಮೊದಲ ನಿಷ್ಕ್ರಿಯ ದಯಾಮರಣ ಪ್ರಕರಣವಾಗಿದೆ. ನ್ಯಾಯಾಲಯದ ಆದೇಶದ ನಂತರ, ನವದೆಹಲಿಯ ಏಮ್ಸ್ನ ವೈದ್ಯರು ನಿಷ್ಕ್ರಿಯ ದಯಾಮರಣ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಈ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗಿದ್ದು, ಅದು ವೈದ್ಯಕೀಯ ಸಿಬ್ಬಂದಿ ಮತ್ತು ರೋಗಿಯ ಸುತ್ತಲೂ ಸಾರ್ವಜನಿಕರು ಸೇರಿರುವುದನ್ನು ತೋರಿಸುತ್ತದೆ. ವೈದ್ಯಕೀಯ ಸಿಬ್ಬಂದಿ ಅಂಗಾಂಗ ದಾನ ಪೆಟ್ಟಿಗೆಯನ್ನು ಆಂಬ್ಯುಲೆನ್ಸ್ಗೆ ಕೊಂಡೊಯ್ಯುತ್ತಾರೆ. ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು, ಹರೀಶ್ ರಾಣಾ ಅವರನ್ನು ಅಂತಿಮ ವಿದಾಯಕ್ಕಾಗಿ ನವದೆಹಲಿಯ ಏಮ್ಸ್ಗೆ ಕರೆದೊಯ್ಯುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಹರೀಶ್ ರಾಣಾ ಎಂಬ ಯುವಕ 2013ರಲ್ಲಿ ಚಂಡೀಗಢದಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಸುಮಾರು 13 ವರ್ಷಗಳ ಕಾಲ ಕೋಮದಲ್ಲಿ ಇದ್ದರು. ಅವರಿಗೆ ಚೇತರಿಕೆ ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ ಹಿನ್ನೆಲೆಯಲ್ಲಿ ಅವರ ಕುಟುಂಬ ಸುಪ್ರೀಂ ಕೋರ್ಟ್ನಲ್ಲಿ ದಯಮಾರಣಕ್ಕೆ ಅರ್ಜಿ ಸಲ್ಲಿಸಿತು. ಸುಪ್ರೀಂ ಕೋರ್ಟ್ ದಯಮಾರಣಕ್ಕೆ ಅನುಮತಿ ನೀಡಿತು, ಇದರಿಂದ ಅವರಿಗೆ ಗೌರವಯುತವಾಗಿ ಸಾವನ್ನು ಸ್ವೀಕರಿಸುವ ಹಕ್ಕು ನೀಡಲಾಯಿತು. ಚಿಕಿತ್ಸೆ ನಿಲ್ಲಿಸುವ ಮೊದಲು ಕುಟುಂಬದವರು ಆಸ್ಪತ್ರೆಯಲ್ಲಿ ಭಾವನಾತ್ಮಕವಾಗಿ ವಿದಾಯ ಹೇಳಿದ ಕ್ಷಣ ದೇಶದಾದ್ಯಂತ ಚರ್ಚೆಗೆ ಕಾರಣವಾಯಿತು.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಹರೀಶ್ ರಾಣಾ ಅವರ ಅಂತಿಮ ವಿದಾಯದ್ದಲ್ಲ. ಈ ವೀಡಿಯೊ ಗುಜರಾತ್ನ ಸೂರತ್ನದ್ದಾಗಿದ್ದು, 45 ವರ್ಷದ ರೀತಾಬೆನ್ ಕೊರಾಟ್ ಅವರ ಮೆದುಳು ನಿಷ್ಕ್ರಿಯಗೊಂಡ ನಂತರ ಅವರ ಕುಟುಂಬ ಸದಸ್ಯರು ಅವರ ಅಂಗಾಂಗಗಳನ್ನು ದಾನ ಮಾಡಿದರು.
ನಮ್ಮ ತನಿಖೆಯ ಆರಂಭದಲ್ಲಿ ನಾವು ಅಂಗಾಂಗ ದಾನ ಪೆಟ್ಟಿಗೆಯನ್ನು ಗುಜರಾತಿಯಲ್ಲಿ "ಲಿವರ್" (ಯಕೃತ್ತು) ಎಂದು ಲೇಬಲ್ ಮಾಡಿರುವುದನ್ನು ಗಮನಿಸಿದ್ದೇವೆ. ಇದಲ್ಲದೆ, ವೈರಲ್ ವೀಡಿಯೊದ ಪ್ರಮುಖ ಫ್ರೇಮ್ಗಳಲ್ಲಿ, ಗುಜರಾತಿಯಲ್ಲಿ "ಡೈಮಂಡ್ ಆಸ್ಪತ್ರೆ" ಎಂದು ಬರೆದಿರುವ ಆಸ್ಪತ್ರೆಯ ಹೆಸರನ್ನು ನಾವು ಗಮನಿಸಿದ್ದೇವೆ. ಇದು ವೈರಲ್ ವೀಡಿಯೊ ಗುಜರಾತ್ನದ್ದಾಗಿರಬಹುದೆಂದು ಸೂಚಿಸುತ್ತದೆ.
ಬಳಿಕ ನಾವು ನಿಜಾಂಶವನ್ನು ತಿಳಿಯಲು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟ ನಡೆಸಿದ್ದೇವೆ. ಆಗ ಜನವರಿ 27 ರಂದು ವೈರಲ್ ವೀಡಿಯೊವನ್ನು ಅಪ್ಲೋಡ್ ಮಾಡಿದ ಇನ್ಸ್ಟಾಗ್ರಾಮ್ ಹ್ಯಾಂಡಲ್ಗೆ ನಮ್ಮನ್ನು ಕರೆದೊಯ್ಯಿತು. ಶೀರ್ಷಿಕೆಯ ಪ್ರಕಾರ, ವೀಡಿಯೊವು ಸೂರತ್ನಲ್ಲಿ ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರ ಯಕೃತ್ತು, ಎರಡು ಮೂತ್ರಪಿಂಡಗಳು ಮತ್ತು ಕಣ್ಣುಗಳನ್ನು ದಾನ ಮಾಡಿರುವುದನ್ನು ತೋರಿಸುತ್ತದೆ. ಪೋಸ್ಟ್ನಲ್ಲಿ ಆ ಮಹಿಳೆಯ ಚಿತ್ರ ಕೂಡ ಇದೆ.
ಈ ಸುಳಿವನ್ನು ಪಡೆದು, ನಾವು ಇನ್ನಷ್ಟು ಹುಡುಕಾಟ ನಡೆಸಿದಾಗ ಜನವರಿ 24 ರಂದು ಗುಜರಾತಿ ನ್ಯೂಸ್ 18 ನಲ್ಲಿ ಪ್ರಕಟವಾದ ವರದಿ ಸಿಕ್ಕಿತು. ಇದರಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಕಾಣುವ ಮಹಿಳೆಯ ಫೋಟೋ ಕೂಡ ಇದೆ.
ವರದಿಯ ಪ್ರಕಾರ, ‘‘ಸೂರತ್ನಲ್ಲಿ ಮಹತ್ವದ ಅಂಗಾಂಗ ದಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ರಾಜ್ಕೋಟ್ ಜಿಲ್ಲೆಯ ಜೆಟ್ಪುರದ ಸೂರತ್ನ ರೀತಾಬೆನ್ ಹರೇಶ್ಭಾಯ್ ಕೊರಾಟ್ (ವಯಸ್ಸು: 45 ವರ್ಷ) ಮಾಡಿದ ಅಂಗಾಂಗ ದಾನದಿಂದಾಗಿ, ಒಟ್ಟು ಐದು ರೋಗಿಗಳು ಹೊಸ ಜೀವನವನ್ನು ಪಡೆದಿದ್ದಾರೆ.’’
‘‘ಸ್ವೀಕರಿಸಿದ ವಿವರಗಳ ಪ್ರಕಾರ, 22/01/2026 ರಂದು ಮಧ್ಯಾಹ್ನ 3:30 ರ ಸುಮಾರಿಗೆ, ರೀತಾಬೆನ್ ಕೋರತ್ ತಮ್ಮ ಮಗ ರಾಜ್ ಹರೇಶ್ಭಾಯ್ ಕೋರತ್ಗೆ ಕರೆ ಮಾಡಿ ತನಗೆ ಹುಷಾರಿಲ್ಲ ಎಂದು ಹೇಳಿ ಮನೆಗೆ ಬರಲು ಹೇಳಿದರು. ಅವರ ಮಗ ಮನೆಗೆ ತಲುಪಿದಾಗ, ರೀತಾಬೆನ್ ವಾಂತಿ ಮಾಡುತ್ತಿದ್ದಳು ಮತ್ತು ಆಕೆಯ ದೇಹವು ತುಂಬಾ ದುರ್ಬಲವಾಗಿತ್ತು. ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಸೂರತ್ನ ಡೈಮಂಡ್ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಡೈಮಂಡ್ ಆಸ್ಪತ್ರೆಯಲ್ಲಿ ಅಗತ್ಯ ಪರೀಕ್ಷೆಗಳನ್ನು ನಡೆಸಿದ ನಂತರ, ಡಾ. ದೀಪೇಶ್ ಕಕ್ಕರ್ (ನರಶಸ್ತ್ರಚಿಕಿತ್ಸಕ) ಮತ್ತು ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಿದರು. ಈ ನಿರ್ಣಾಯಕ ಕ್ಷಣದಲ್ಲಿ, ಕುಟುಂಬ ಸದಸ್ಯರಾದ ಹರೇಶ್ಭಾಯ್ ಕೋರತ್, ರಾಜ್ ಕೊರಾಟ್, ರಾಜ್ವಿ ಕೋರತ್, ಕೌಶಿಕ್ಭಾಯ್ ಕೋರತ್, ಕೇಶವ್ಲಾಲ್ ಭುವ, ವಿಪುಲ್ಭಾಯ್ ಭುವ, ದಿನೇಶ್ಭಾಯ್ ಅಭಂಗಿ ಮತ್ತು ಕಿಶೋರ್ಭಾಯ್ ರಿಬ್ಡಿಯಾ ಅವರು ಮಾನವೀಯ ಮತ್ತು ಧೈರ್ಯಶಾಲಿ ಅಂಗಾಂಗ ದಾನದ ಬಗ್ಗೆ ನಿರ್ಧರಿಸಲು ಜೀವನ್ ದೀಪ್ ಅಂಗಾಂಗ ದಾನ ಪ್ರತಿಷ್ಠಾನವನ್ನು ಸಂಪರ್ಕಿಸಿದರು.’’ ಎಂಬ ಮಾಹಿತಿ ಇದರಲ್ಲಿದೆ.
ಅಲ್ಲದೆ ಜನವರಿ 28 ರಂದು GUJARAT MANOMANTHAN ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಈ ಕುರಿತು ಒಂದು ವೀಡಿಯೊ ವರದಿಯನ್ನು ನಾವು ಕಂಡುಕೊಂಡೆವು. ಇದರಲ್ಲಿ ವೈರಲ್ ವೀಡಿಯೊ ಕೂಡ ಇದೆ. ವರದಿಯ ಪ್ರಕಾರ, ವೀಡಿಯೊದಲ್ಲಿ ರೀತಾಬೆನ್ ಕೊರಾಟ್ ಅವರ ಮೆದುಳು ನಿಷ್ಕ್ರಿಯಗೊಂಡ ನಂತರ ಅವರ ಅಂಗಗಳನ್ನು ದಾನ ಮಾಡಲಾಗಿತ್ತು.