ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಸಣ್ಣ ದೇವಸ್ಥಾನದಿಂದ ಹೊರಬರುತ್ತಿರುವ ಪೂಜಾರಿ ಮತ್ತು ಇತರರನ್ನು ಪೊಲೀಸ್ ಅಧಿಕಾರಿಯೊಬ್ಬರು ಲಾಠಿಯಿಂದ ಹೊಡೆಯುತ್ತಿರುವುದು ಕಾಣಬಹುದು. ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಹಿಂದೂಗಳ ಪರಿಸ್ಥಿತಿ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ತಮಿಳುನಾಡಲ್ಲಿ ಹಿಂದೂಗಳ ಪರಿಸ್ಥಿತಿ ಬಾಂಗ್ಲಾ ದೇಶಕ್ಕಿಂತ ಕಡೆಯಾಗ್ತಿದೆ ನೋಡಿ. ಹಿಂದೂ ವಿರೋಧಿಗಳಿಗೆ ಮತ ಹಾಕಿ ಚುನಾವಣೆಯಲ್ಲಿ ಗೆಲ್ಲಿಸಿ ಅಧಿಕಾರ ಕೊಟ್ಟರೆ ಆಗುವುದು ಹೀಗೆಯೆ. ತಮಿಳುನಾಡಿನಲ್ಲಿ ಈಗ ಸದ್ಯದ ಹಿಂದೂಗಳ ಪರಿಸ್ಥಿತಿ ಇದು’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2020ರ ಕೊರೊನಾ ಲಾಕ್ಡೌನ್ ಸಮಯದ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಏಪ್ರಿಲ್ 3, 2020 ರಂದು ಎಕ್ಸ್ ಬಳಕೆದಾರರೊಬ್ಬರುಇದೇ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿತು. ಇದರಲ್ಲಿ ಘಟನೆ ಎಲ್ಲಿ ನಡೆಯಿತು ಎಂದು ಉಲ್ಲೇಖಿಸಲಾಗಿಲ್ಲ. "ಸ್ವಾಮಿಯೇ ಬಂದು ಅರ್ಚಕರಿಗೆ ಮೊದಲ ಏಟು ಕೊಟ್ಟರು" ಎಂದು ವಿಡಂಬನಾತ್ಮಕವಾಗಿ ಕ್ಯಾಪ್ಶನ್ ನೀಡಲಾಗಿದೆ.
ಯೂಟ್ಯೂಬ್ನಲ್ಲೂ ಮಾರ್ಚ್ 29, 2020 ರಂದು ಇದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಕೊರೊನಾ ಎಂದು ಹ್ಯಾಶ್ಟ್ಯಾಗ್ ಬಳಸಲಾಗಿದೆ. ಈ ವೈರಲ್ ವೀಡಿಯೊದ ಬ್ಯಾಕ್ಗ್ರೌಂಡ್ನಲ್ಲಿ ಓರ್ವ ವ್ಯಕ್ತಿ ಕೊರೊನಾ ವೈರಸ್ ಎಂದು ಹೇಳುತ್ತಿರುವುದು ಕೇಳಬಹುದು. ಹೀಗಾಗಿ ಈ ವೀಡಿಯೊ ಕೊರೊನಾ ಲಾಕ್ಡೌನ್ ಸಮಯದಲ್ಲಿ ತೆಗೆದಿರಬಹುದೆಂಬ ಅನುಮಾನ ಮೂಡಿತು. ಕೊರೊನಾ ಅವಧಿಯಲ್ಲಿ, ಸಾರ್ವಜನಿಕರು ಎಲ್ಲಾ ಧಾರ್ಮಿಕ ಪೂಜಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿತ್ತು. ಆ ಅವಧಿಯಲ್ಲಿ, ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ಮುಸ್ಲಿಮರ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದರು.
ಕೊರೊನಾ ಅವಧಿಯಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡ ಬಗ್ಗೆ CGTN America ಏಪ್ರಿಲ್ 1, 2020 ರಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಒಂದು ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ 49ನೇ ಸೆಕೆಂಡ್ನಿಂದ ವೈರಲ್ ವೀಡಿಯೊವನ್ನು ಕಾಣಬಹುದು.
ಇಷ್ಟೇ ಅಲ್ಲದೆ ನಮ್ಮ ಹುಡುಕಾಟದ ಸಂದರ್ಭ ತಮಿಳುನಾಡು ಫ್ಯಾಕ್ಟ್ಚೆಕ್ನ ಫೇಸ್ಬುಕ್ ಖಾತೆಯಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ಹೇಳಲಾಗಿದೆ. ‘‘ಇದು ದೇವಸ್ಥಾನದಲ್ಲಿ ಪೂಜೆ ಮಾಡಿದವರ ಮೇಲೆ ಕ್ರಮಕೈಗೊಂಡ 2020 ರ ಕೊರೊನಾ ಅವಧಿಯ ವಿಡಿಯೋ!’’ ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ತಮಿಳುನಾಡಲ್ಲಿ ಹಿಂದೂಗಳ ಪರಿಸ್ಥಿತಿ ಎಂದು ಪ್ರಸಾರವಾಗುವ ವೀಡಿಯೊ 2020 ರ ಕೊರೊನಾ ಲಾಕ್ಡೌನ್ ಸಮಯದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.