ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಧ್ವಜ ಮಾರುತ್ತಿದ್ದ ಬೀದಿ ವ್ಯಾಪಾರಿಯೊಬ್ಬರ ಮೇಲೆ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಭಾರತೀಯ ಸೇನಾ ಅಧಿಕಾರಿಯೊಬ್ಬರು ಬಾಂಗ್ಲಾದೇಶದ ಧ್ವಜ ಮಾರುತ್ತಿದ್ದ ಮಾರಾಟಗಾರನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ ಎಂದು ಹಲವಾರು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಿಜೆಪಿ ಸಂಘದ ಅಚ್ಚುಮೆಚ್ಚಿನ ಜಿಹಾದಿಗಳು, ಬಾಂಗ್ಲಾದೇಶದ ಬಾವುಟ ಮಾರುತ್ತಿದ್ದ ಬಿಜೆಪಿ ಸಂಘದ ಮುಸ್ಲಿಂಗೆ ಒದೆ ಕೊಟ್ಟ ಭಾರತೀಯ ಸೇನೆಯ ಯೋಧ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಹೇಳಿಕೆ ಸುಳ್ಳು ಎಂದು ನ್ಯೂಸ್ಮೀಟರ್ ಕಂಡುಕೊಂಡಿದೆ. ಈ ವೀಡಿಯೊ ಭಾರತದ್ದಲ್ಲ, ಬಾಂಗ್ಲಾದೇಶದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಸಮವಸ್ತ್ರದಲ್ಲಿರುವ ವ್ಯಕ್ತಿ ಭಾರತೀಯ ಸೇನೆಯವರಲ್ಲ.
ನಾವು ವೀಡಿಯೊದಿಂದ ಕೀಫ್ರೇಮ್ಗಳನ್ನು ಹೊರತೆಗೆದು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದ್ದೇವೆ. ಇದು ಜೂನ್ 11 ರಂದು ನ್ಯೂಸ್ 1 ಟಿವಿ ಪ್ರಕಟಿಸಿದ ‘ಸೇನೆಯು ಧ್ವಜ ಮಾರಾಟಗಾರನನ್ನು ಕಂಡುಹಿಡಿದು 1 ಲಕ್ಷ ಟಾಕಾ ದೇಣಿಗೆ ನೀಡಿದೆ!' ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೊವನ್ನು ನಮಗೆ ತೋರಿಸಿತು.
ಜೂನ್ 12 ರಂದು ಢಾಕಾ ಪೋಸ್ಟ್ ಕೂಡ ಇದೇ ರೀತಿಯ ವೀಡಿಯೊವನ್ನು ಅಪ್ಲೋಡ್ ಮಾಡಿತ್ತು. ‘ಲಾಠಿ ಚಾರ್ಜ್ ಮಾಡಿದ ಧ್ವಜ ಮಾರಾಟಗಾರನಿಗೆ ಸೇನೆ 10 ಲಕ್ಷ ಟಾಕಾ ಉಡುಗೊರೆ ನೀಡಿದೆ' ಎಂಬ ಶೀರ್ಷಿಕೆಯ ವಿಡಿಯೋ ಇದಾಗಿದೆ.
ಘಟನೆಯನ್ನು ಪರಿಶೀಲಿಸಲು, ನಾವು ಮತ್ತಷ್ಟು ಕೀವರ್ಡ್ ಹುಡುಕಾಟಗಳನ್ನು ನಡೆಸಿದ್ದೇವೆ. ಈ ಸಂದರ್ಭ ಜೂನ್ 12, 2025 ರ ದಿನಾಂಕದ ಅಜ್ಕೆರ್ ಪತ್ರಿಕಾದ ಸುದ್ದಿ ವರದಿ ನಮಗೆ ಸಿಕ್ಕಿತು. ಇದರಲ್ಲಿ ಈ ಘಟನೆಯ ಸಂಪೂರ್ಣ ವರದಿ ಕಂಡುಕೊಂಡಿದ್ದೇವೆ.
ವರದಿಯ ಪ್ರಕಾರ, ಢಾಕಾದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ vs ಸಿಂಗಾಪುರ ಫುಟ್ಬಾಲ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಕ್ರೀಡಾಂಗಣದ ಹೊರಗೆ ಜನಜಂಗಳಿ ತುಂಬಿದ್ದ ಕಾರಣ, ಬಾಂಗ್ಲಾದೇಶ ಸೇನಾ ಸಿಬ್ಬಂದಿ ಲಾಠಿ ಪ್ರಹಾರ ನಡೆಸಿ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭ ಧ್ವಜ ಮಾರಾಟಗಾರನ ಮೇಲೂ ಹಲ್ಲೆ ನಡೆಸಲಾಗಿದೆ.
ಬಳಿಕ ಗುಲಿಸ್ತಾನ್ ಸೇನಾ ಶಿಬಿರದ ಲೆಫ್ಟಿನೆಂಟ್ ಕರ್ನಲ್ ಅಫ್ಜಲುರ್ ರೆಹಮಾನ್ ಚೌಧರಿ ಅವರು, ಈ ಘಟನೆ ಉದ್ದೇಶಪೂರ್ವಕವಲ್ಲ ಎಂದು ದೃಢಪಡಿಸಿದರು. ಸೇನೆಯು ಧ್ವಜ ಮಾರಾಟಗಾರನಿಗೆ ಕ್ಷಮೆಯಾಚಿಸಿತು ಮತ್ತು ಅವರಿಗೆ 1 ಲಕ್ಷ ಟಾಕ್ ಪರಿಹಾರವನ್ನು ನೀಡಿತು.
ವೈರಲ್ ಆಗಿರುವ ಈ ವೀಡಿಯೊವನ್ನು ಭಾರತೀಯ ಸೇನೆಗೆ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ. ವಾಸ್ತವದಲ್ಲಿ, ಇದು ಬಾಂಗ್ಲಾದೇಶದ ಢಾಕಾದಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಸಮಯದಲ್ಲಿ ಸ್ಥಳೀಯ ಸೇನಾ ಸಿಬ್ಬಂದಿ ಧ್ವಜ ಮಾರಾಟಗಾರನಿಗೆ ಹೊಡೆದ ಘಟನೆಯನ್ನು ತೋರಿಸಿದೆ.
ಆದ್ದರಿಂದ, ಬಾಂಗ್ಲಾದೇಶದ ಧ್ವಜವನ್ನು ಮಾರಾಟ ಮಾಡಿದ್ದಕ್ಕಾಗಿ ಭಾರತೀಯ ಸೇನಾ ಜವಾನನೊಬ್ಬ ಧ್ವಜ ಮಾರಾಟಗಾರನನ್ನು ಹೊಡೆದಿದ್ದಾನೆ ಎಂಬ ಹೇಳಿಕೆ ಸುಳ್ಳು.