Fact Check: ವ್ಯಕ್ತಿಯೋರ್ವ ಕೇಸರಿ ಬಟ್ಟೆ ಹೊದ್ದುಕೊಂಡು ಮಲಗಿದ್ದಕ್ಕೆ ಮುಸ್ಲಿಮರು ದೊಣ್ಣೆಯಿಂದ ಹೊಡೆದಿದ್ದು ನಿಜವೇ?

ಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಮಲಗಿದ್ದಕ್ಕೆ ಈ ವ್ಯಕ್ತಿ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ.

By Vinay Bhat  Published on  9 Oct 2024 1:58 PM GMT
Fact Check: ವ್ಯಕ್ತಿಯೋರ್ವ ಕೇಸರಿ ಬಟ್ಟೆ ಹೊದ್ದುಕೊಂಡು ಮಲಗಿದ್ದಕ್ಕೆ ಮುಸ್ಲಿಮರು ದೊಣ್ಣೆಯಿಂದ ಹೊಡೆದಿದ್ದು ನಿಜವೇ?
Claim: ಕೇಸರಿ ಬಟ್ಟೆ ಹೊದ್ದುಕೊಂಡು ಮಲಗಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಮುಸ್ಲಿಮರು ದೊಣ್ಣೆಯಿಂದ ಹೊಡೆದಿದ್ದಾರೆ.
Fact: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡದಂತೆ ಹೇಳಿದ್ದಕ್ಕೆ ವ್ಯಕ್ತಿಗೆ ಹೊಡೆದ ಘಟನೆ ಇದಾಗಿದ್ದು, ಎರಲ್ಲರೂ ಹಿಂದೂಗಳಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬ ಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಮಲಗಿದ್ದಾನೆ. ಅಲ್ಲಿಗೆ ಮೂರು ಜನ ಒಂದು ಬೈಕ್​ನಲ್ಲಿ ಬಂದಿದ್ದು, ಇದರಲ್ಲಿ ಓರ್ವ ವ್ಯಕ್ತಿ ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ ಮನಬಂದಂತೆ ದೊಣ್ಣೆಯಿಂದ ಹೊಡೆಯುತ್ತಾನೆ. ಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಮಲಗಿದ್ದಕ್ಕೆ ಈ ವ್ಯಕ್ತಿ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಅಕ್ಟೋಬರ್ 7, 2024 ರಂದು ಈ ವಿಡಿಯೋವನ್ನು ಹಂಚಿಕೊಂಡು, ‘‘ದೆಹಲಿಯ ಮಾಡೆಲ್ ಟೌನ್‌ನ ಕಾನೂನು ಮತ್ತು ಸುವ್ಯವಸ್ಥೆ ಇದು. ವ್ಯಕ್ತಿಯೊಬ್ಬ ಕೇಸರಿ ಬಟ್ಟೆಯನ್ನು ಹೊದ್ದುಕೊಂಡು ಆರಾಮವಾಗಿ ಮಲಗಿದ್ದಾನೆ... ಶಾಂತಿದೂತರು ಬೈಕ್‌ನಲ್ಲಿ ಬಂದು ವಿನಾಕಾರಣ ದೊಣ್ಣೆಯಿಂದ ಹೊಡೆಯಲಾರಂಭಿಸಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವಿಡಿಯೋ ವೈರಲ್ ಆಗುತ್ತಿರುವುದನ್ನು ನೀವು ಇಲ್ಲೂ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಗೂಗಲ್​ನಲ್ಲಿ ವೈರಲ್ ವಿಡಿಯೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಈ ಪ್ರಕರಣದಲ್ಲಿ ಸಾರ್ವಜನಿಕ ಪಾರ್ಕ್ ಒಂದರಲ್ಲಿ ಮೂತ್ರ ಮಾಡದಂತೆ ವ್ಯಕ್ತಿಯೊಬ್ಬ ಹೇಳಿದ್ದು, ಇದಕ್ಕಾಗಿ ಮರುದಿನ ಆತನನ್ನು ಅಮಾನುಷವಾಗಿ ಥಳಿಸಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಹಾಗೆಯ ಈ ಪ್ರರಣದಲ್ಲಿ ಭಾಗಿಯಾದವರೆಲ್ಲರೂ ಹಿಂದೂಗಳಾಗಿದ್ದಾರೆ.

ಈ ಘಟನೆಯ ಕುರಿತು ಅಕ್ಟೋಬರ್ 6, 2024 ರಂದು ರಿಪಬ್ಲಿಕ್ ವರ್ಲ್ಡ್ ಪ್ರಕಟಿಸಿದ ವರದಿ ನಮಗೆ ಸಿಕ್ಕಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಹೇಳಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಲಾಗಿದೆ. ಉತ್ತರ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಶುಕ್ರವಾರ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದಿದೆ’ ಎಂದು ಬರೆಯಲಾಗಿದೆ.

ಹಾಗೆಯೆ ಅಕ್ಟೋಬರ್ 6, 2024 ರಂದು ಇಂಡಿಯಾ ಟಿವಿ ಮಾಡಿದ ವರದಿಯಲ್ಲಿ, ‘ಅಚ್ಚರಿಯ ಘಟನೆಯೊಂದರಲ್ಲಿ, ಪಾರ್ಕ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪಿಯನ್ನು ತಡೆದ ವ್ಯಕ್ತಿಯೊಬ್ಬನಿಗೆ ಮಾರನೇ ದಿನ ದೊಣ್ಣೆಯಿಂದ ಥಳಿಸಲಾಗಿದೆ. ಆರ್ಯನ್ ಎಂದು ಗುರುತಿಸಲಾದ ಆರೋಪಿ ಮರುದಿನ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ತನ್ನನ್ನು ಮೂತ್ರ ಮಾಡದಂತೆ ತಡೆದ ವ್ಯಕ್ತಿಯನ್ನು ಥಳಿಸಿದ್ದಾನೆ. ಇದಾದ ಬಳಿಕ ಅವರು ಬೈಕ್ ನಲ್ಲಿ ತೆರಳಿದ್ದರು. ಈ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ವಾಯವ್ಯ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ಫುಟ್‌ಪಾತ್‌ನಲ್ಲಿ ಕೇಸರಿ ಬಣ್ಣದ ಬೆಡ್ ಶೀಟ್ ಹಾಕಿ ಮಲಗಿದ್ದ ರಾಮ್‌ಪಾಲ್‌ಗೆ ಆರ್ಯನ್ ಥಳಿಸಲು ಆರಂಭಿಸಿದ್ದ. ಸಂತ್ರಸ್ತ ಎದ್ದು ಕುಳಿತ ನಂತರವೂ ದಾಳಿಕೋರರು ದೊಣ್ಣೆಗಳಿಂದ ಹಲ್ಲೆ ಮುಂದುವರಿಸಿ ನಂತರ ಪರಾರಿಯಾಗಿದ್ದರು’ ಎಂದು ವರದಿಯಲ್ಲಿದೆ.

ಅಕ್ಟೋಬರ್ 7, 2024 ಟೈಮ್ಸ್ ಆಫ್ ಇಂಡಿಯಾದ ವರದಿಯಲ್ಲಿ ಹೀಗಿದೆ: ‘ವಾಯವ್ಯ ದೆಹಲಿಯ ಮಾಡೆಲ್ ಟೌನ್​ನಲ್ಲಿ ಶುಕ್ರವಾರ ಇಬ್ಬರು ಪುರುಷರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಆಕ್ಷೇಪಿಸಿದ್ದಕ್ಕಾಗಿ 28 ವರ್ಷದ ವ್ಯಕ್ತಿಯನ್ನು ದೊಣ್ಣೆಯಿಂದ ಥಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತನನ್ನು ಮಾಡೆಲ್ ಟೌನ್ ನಿವಾಸಿ ರಾಮ್ ಪಾಲ್ ಎಂದು ಗುರುತಿಸಲಾಗಿದ್ದು, ಟೆಂಟ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಳಿಗ್ಗೆ ೭ ಗಂಟೆ ಸುಮಾರಿಗೆ ಅವರು ಅಂಗಡಿಯ ಮುಂದೆ ಮಲಗಿದ್ದಾಗ ಈ ಘಟನೆ ನಡೆದಿದೆ’.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆ ಕೇಸರಿ ಹೊದಿಕೆ ಹೊದ್ದು ಮಲಗಿದ್ದಕ್ಕೆ ಮುಸ್ಲಿಮರು ವ್ಯಕ್ತಿಗೆ ಹೊಡೆದಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡದಂತೆ ಹೇಳಿದ್ದಕ್ಕೆ ವ್ಯಕ್ತಿಗೆ ಹೊಡೆದಿರುವ ಘಟನೆ ಇದಾಗಿದೆ. ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿದ್ದವರು ಹಿಂದೂಗಳಾಗಿದ್ದಾರೆ.

Claim Review:ಕೇಸರಿ ಬಟ್ಟೆ ಹೊದ್ದುಕೊಂಡು ಮಲಗಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಮುಸ್ಲಿಮರು ದೊಣ್ಣೆಯಿಂದ ಹೊಡೆದಿದ್ದಾರೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡದಂತೆ ಹೇಳಿದ್ದಕ್ಕೆ ವ್ಯಕ್ತಿಗೆ ಹೊಡೆದ ಘಟನೆ ಇದಾಗಿದ್ದು, ಎರಲ್ಲರೂ ಹಿಂದೂಗಳಾಗಿದ್ದಾರೆ.
Next Story