Fact Check: ಹರಿದ್ವಾರದಲ್ಲಿ ಲವ್ ಜಿಹಾದ್ ಮೂಲಕ ಮುಸ್ಲಿಂ ವ್ಯಕ್ತಿ ಹಿಂದೂ ಯುವತಿಯನ್ನು ಕೊಂದಿದ್ದಾನೆಯೇ?, ಸತ್ಯ ಇಲ್ಲಿ ತಿಳಿಯಿರಿ
ವೀಡಿಯೊದಲ್ಲಿ, ಸೂಟ್ಕೇಸ್ನಲ್ಲಿ ತುಂಬಿದ ಹುಡುಗಿಯ ಮೃತದೇಹ ಮತ್ತು ನೆಲದ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಜನಸಮೂಹ ಸುತ್ತುವರೆದು ಮಹಿಳೆಯ ಕೊಲೆಯ ಆರೋಪ ಹೊರಿಸುತ್ತಿರುವುದನ್ನು ನೋಡಬಹುದು.
By Vinay Bhat
Claim:ಹರಿದ್ವಾರದಲ್ಲಿ ಲವ್ ಜಿಹಾದ್ ಮೂಲಕ ಮುಸ್ಲಿಂ ವ್ಯಕ್ತಿ ಹಿಂದೂ ಯುವತಿಯನ್ನು ಕೊಂದಿದ್ದಾನೆ.
Fact:ಈ ಹೇಳಿಕೆ ಸುಳ್ಳು. ಬಲಿಪಶು ಮತ್ತು ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ.
(Content Warning: The article contains extremely graphic visuals, which some readers may find distressing; discretion is advised. Due to its sensitive nature, to respect privacy and avoid further dissemination of potentially harmful content, we have chosen not to include the link to the post in this story.)
ಹರಿದ್ವಾರದಲ್ಲಿ ಹಿಂದೂ ಹುಡುಗಿಯನ್ನು ಆಕೆಯ ಮುಸ್ಲಿಂ ಗೆಳೆಯನೇ ಕೊಲೆ ಮಾಡಿದ್ದಾನೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಸೂಟ್ಕೇಸ್ನಲ್ಲಿ ತುಂಬಿದ ಹುಡುಗಿಯ ಮೃತದೇಹ ಮತ್ತು ನೆಲದ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ಜನಸಮೂಹ ಸುತ್ತುವರೆದು ಮಹಿಳೆಯ ಕೊಲೆಯ ಆರೋಪ ಹೊರಿಸುತ್ತಿರುವುದನ್ನು ನೋಡಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಮಾರ್ಚ್ 31, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಹರಿದ್ವಾರದ #ಅಬ್ದುಲ್ ಲವ್ ಜಿಹಾದ್ ಮೂಲಕ ಮತ್ತೊಬ್ಬ ಹಿಂದೂ ಯುವತಿಯನ್ನು ಸ್ವರ್ಗಕ್ಕೆ ಕಳುಹಿಸಿದ್ದಾನೆ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಹೇಳಿಕೆ ಸುಳ್ಳು ಎಂದು ನ್ಯೂಸ್ ಮೀಟರ್ ಕಂಡುಕೊಂಡಿದೆ. ಈ ಪ್ರಕರಣದಲ್ಲಿ ಯಾವುದೇ ಕೋಮು ಕೋನವಿಲ್ಲ.
ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಮಾರ್ಚ್ 25, 2022 ರಂದು ಟಿವಿ9 ಉತ್ತರಪ್ರದೇಶ ಉತ್ತರಾಖಂಡ್ ಅಪ್ಲೋಡ್ ಮಾಡಿದ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಆ ವೀಡಿಯೊಗೆ ‘ರೂರ್ಕಿ ಕ್ರೈಮ್ ನ್ಯೂಸ್: ಪ್ರೇಮಿ ತನ್ನ ಗೆಳತಿಯ ಮೃತ ದೇಹವನ್ನು ಸೂಟ್ಕೇಸ್ನಲ್ಲಿ ಇಟ್ಟುಕೊಂಡು ಸುತ್ತಾಡುತ್ತಿದ್ದಾಗ, ಪೊಲೀಸರು ಅವನನ್ನು ಹಿಡಿದರು, ಆತ ಈ ಕಾರಣವನ್ನು ನೀಡಿದ್ದಾನೆ..’ ಎಂದು ಶೀರ್ಷಿಕೆ ನೀಡಲಾಗಿದೆ.
ಈ ವೀಡಿಯೊದ 2:03 ನಿಮಿಷಗಳ ಅವಧಿಯಲ್ಲಿ ವೈರಲ್ ವೀಡಿಯೊವನ್ನು ನೋಡಬಹುದು. ವೀಡಿಯೊದ ಪ್ರಕಾರ, ಈ ಅಪರಾಧವು ಉತ್ತರಾಖಂಡದ ಪಿರನ್ ಕಲಿಯಾರ್ನಲ್ಲಿ ನಡೆದಿದೆ.
ಈ ಕುರಿತು ಕೀವರ್ಡ್ ಸರ್ಚ್ ನಡೆಸಿದಾಗ, ಮಾರ್ಚ್ 26, 2022 ರಂದು ‘ಕಲಿಯಾರ್ ಕೊಲೆ ಪ್ರಕರಣ: ಸೂಟ್ಕೇಸ್ನಲ್ಲಿ ಹುಡುಗಿಯ ಶವ ಪತ್ತೆ, ಹುಡುಗ ಮೊದಲು ಕಥೆಯನ್ನು ಹೆಣೆದ, ನಂತರ ಕೊಲೆಗೆ ಕಾರಣವನ್ನು ಬಹಿರಂಗಪಡಿಸಿದ್ದಾನೆ’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ ನ್ಯೂಸ್ 18 ವರದಿಯನ್ನು ನಾವು ಕಂಡುಕೊಂಡೆವು.
ವರದಿಯ ಪ್ರಕಾರ, ‘ಗುಲ್ಶೇರ್ ಅಲಿಯಾಸ್ ಗುಲ್ಬೆಜ್ ತನ್ನ ಗೆಳತಿಯನ್ನು ಪಿರಾನ್ ಕಲಿಯಾರ್ನಲ್ಲಿರುವ ಅತಿಥಿ ಗೃಹದಲ್ಲಿ ಕೊಲೆ ಮಾಡಿದ್ದಾನೆ. ಅವರಿಬ್ಬರ ನಡುವೆ ಸಂಬಂಧವಿತ್ತು, ಗುಲ್ಶೇರ್ನ ಒತ್ತಡದ ಹೊರತಾಗಿಯೂ, ಹುಡುಗಿ ಅವನನ್ನು ಮದುವೆಯಾಗಲು ನಿರಾಕರಿಸಿದಳು. ಅವಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಗಿ ಅವನು ಒಪ್ಪಿಕೊಂಡನು. ಅವನು ಆಕೆಯ ದೇಹವನ್ನು ಸೂಟ್ಕೇಸ್ನಲ್ಲಿ ತುಂಬಿಸಿದ್ದ. ಭಾರವಾದ ಸೂಟ್ಕೇಸ್ ಅನ್ನು ಎಳೆಯಲು ಪ್ರಯತ್ನಿಸುತ್ತಿದ್ದಾಗ ಹೋಟೆಲ್ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ’ ಎಂಬ ಮಾಹಿತಿ ಇದರಲ್ಲಿದೆ.
ಮಾರ್ಚ್ 26, 2022 ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಈ ಘಟನೆ ಮಾರ್ಚ್ 24, 2022 ರಂದು ನಡೆದಿದೆ. ವರದಿಯ ಶೀರ್ಷಿಕೆ, ‘ಉತ್ತರಾಖಂಡ: ಹೋಟೆಲ್ನಲ್ಲಿ ವ್ಯಕ್ತಿ ಪ್ರೇಮಿಯನ್ನು ಕೊಂದು, ಸೂಟ್ಕೇಸ್ನಲ್ಲಿ ಶವವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾನೆ’ ಎಂದಿದೆ.
"ಆ ವ್ಯಕ್ತಿಯನ್ನು ಹರಿದ್ವಾರದ ಜ್ವಾಲಾಪುರ ನಿವಾಸಿ ಗುಲ್ಜೇಬ್ ಹುಸೇನ್ ಅನ್ಸಾರಿ ಎಂದು ಗುರುತಿಸಲಾಗಿದೆ" ಎಂದು ವರದಿ ತಿಳಿಸಿದೆ. ಬಾಲಕಿಯನ್ನು ರಾಮ್ಸಾ ಅನ್ಸಾರಿ ಎಂದು ಗುರುತಿಸಲಾಗಿದೆ. ವರದಿಯಲ್ಲಿ ಹುಡುಗಿಯ ತಂದೆಯ ಹೆಸರು ಮೊಹಮ್ಮದ್ ರಶೀದ್ ಅನ್ಸಾರಿ ಮತ್ತು ಆಕೆಯ ಚಿಕ್ಕಪ್ಪನ ಹೆಸರು ಮೊಹಮ್ಮದ್ ಯೂನಸ್ ಅನ್ಸಾರಿ ಎಂದು ಉಲ್ಲೇಖಿಸಲಾಗಿದೆ. ಇದು ಬಲಿಪಶು ಮುಸ್ಲಿಂ ಕುಟುಂಬದಿಂದ ಬಂದವರು ಎಂಬುದನ್ನು ಖಚಿತವಾಗಿ ಹೇಳುತ್ತದೆ.
ಇದೇ ಪ್ರಕರಣದಲ್ಲಿ, ಹೋಟೆಲ್ನಲ್ಲಿ ರೂಮ್ ಪಡೆಯಲು ಹುಡುಗಿಯ ನಕಲಿ ಐಡಿಯನ್ನು ಬಳಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಈಟಿವಿ ಭಾರತ್ ವರದಿ ಮಾಡಿದೆ. ಆ ಹುಡುಗಿ ಮಂಗಳೂರಿನ ನಿವಾಸಿಯಾಗಿದ್ದು, ಆರೋಪಿಯ ದೂರದ ಸಂಬಂಧಿಯಾಗಿದ್ದಾಳೆ. ವಿಚಾರಣೆಯ ಸಮಯದಲ್ಲಿ, ಹುಡುಗಿಯ ಕುಟುಂಬವು ತಮ್ಮ ಮದುವೆಗೆ ವಿರೋಧಿಸಿತು ಮತ್ತು ಅವಳು ಅವರ ಪರವಾಗಿ ನಿಂತಳು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಈಟಿವಿ ಭಾರತ್ ವರದಿ ತಿಳಿಸಿದೆ. ಇದರಿಂದ ಕೋಪಗೊಂಡ ಅವನು ಅವಳನ್ನು ಕೊಂದು, ಆಕೆಯ ದೇಹವನ್ನು ಸೂಟ್ಕೇಸ್ನಲ್ಲಿ ಇರಿಸಿ, ಗಂಗನಹಾರ್ ಕಾಲುವೆಯಲ್ಲಿ ವಿಲೇವಾರಿ ಮಾಡಲು ಹೊರಟಿದ್ದ ಎಂದಿದೆ.
ಹೀಗಾಗಿ ಬಲಿಪಶು ಮತ್ತು ಆರೋಪಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಮತ್ತು ದೂರದ ಸಂಬಂಧಿಗಳು ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ವೈರಲ್ ಆಗಿರುವ ಈ ಹೇಳಿಕೆ ಸುಳ್ಳು ಎಂದು ನ್ಯೂಸ್ಮೀಟರ್ ತೀರ್ಮಾನಿಸಿದೆ. ಈ ಪ್ರಕರಣದಲ್ಲಿ ಯಾವುದೇ ಕೋಮು ಕೋನವಿಲ್ಲ.