Fact Check: ಮಹಾಕುಂಭಕ್ಕೆ ತೆರಳುತ್ತಿದ್ದ ರೈಲಿಗೆ ಕಲ್ಲು ಎಸೆದಿದ್ದು ಮುಸ್ಲಿಮರೇ? ಇಲ್ಲ, ನಿಜಾಂಶ ಇಲ್ಲಿ ತಿಳಿಯಿರಿ

ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಶೇಷ ರೈಲಿಗೆ ಕಲ್ಲು ಎಸೆದ ಮುಸ್ಲಿಮರು ಎಂಬ ಹೇಳಿಕೆಯೊಂದಿಗೆ ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

By Vinay Bhat
Published on : 29 Jan 2025 2:51 PM IST

Fact Check: ಮಹಾಕುಂಭಕ್ಕೆ ತೆರಳುತ್ತಿದ್ದ ರೈಲಿಗೆ ಕಲ್ಲು ಎಸೆದಿದ್ದು ಮುಸ್ಲಿಮರೇ? ಇಲ್ಲ, ನಿಜಾಂಶ ಇಲ್ಲಿ ತಿಳಿಯಿರಿ
Claim:ಝಾನ್ಸಿಯಿಂದ ಪ್ರಯಾಗರಾಜ್‌ಗೆ ಪ್ರಯಾಣಿಸುತ್ತಿದ್ದ ವಿಶೇಷ ಮಹಾಕುಂಭ ರೈಲಿನ ಮೇಲೆ ಕಲ್ಲು ತೂರಾಟ ಮಾಡಿದ ಮುಸ್ಲಿಮರು.
Fact:ರೈಲಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದರಿಂದ ರೈಲಿನ ಡೋರ್ ತೆಗೆಯಲಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಕಲ್ಲು ಎಸೆದಿರುವ ಘಟನೆ ಇದಾಗಿದೆ. ಇದರಲ್ಲಿ ಯಾವುದೇ ಕೋಮುಕೋನವಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ರೈಲು ಒಂದು ರೈಲ್ವೆ ಸ್ಟೇಷನ್​ನಲ್ಲಿ ನಿಂತಿರುವುದನ್ನು ಕಾಣಬಹುದು. ಆಗ ಕೆಲ ಜನರು ರೈಲಿಗೆ ಕಲ್ಲನ್ನು ಎಸೆಯುತ್ತಾರೆ. ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಶೇಷ ರೈಲಿಗೆ ಕಲ್ಲು ಎಸೆದ ಮುಸ್ಲಿಮರು ಎಂಬ ಹೇಳಿಕೆಯೊಂದಿಗೆ ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಜನವರಿ 28, 2025 ರಂದು ಈ ವೀಡಿಯೊವನ್ನು ಅಪ್ಲೋಡ್ ಮಾಡಿ, ‘‘ಜನವರಿ 28 ರಂದು ಝಾನ್ಸಿಯಿಂದ ಪ್ರಯಾಗರಾಜ್‌ಗೆ ಪ್ರಯಾಣಿಸುತ್ತಿದ್ದ ವಿಶೇಷ ಮಹಾಕುಂಭ ರೈಲಿನ ಮೇಲೆ ಕಲ್ಲು ತೂರಾಟ ಮಾಡಿದ ಮುಸ್ಲಿಮರು’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ರೈಲು ನಿಲ್ದಾಣಕ್ಕೆ ರೈಲು ಬಂದು ನಿಂತಾಗ ಪ್ರಯಾಣಿಕರು ಹತ್ತಲು ರೈಲಿನ ಬಾಗಿಲು ತೆಗೆಯದ ಕಾರಣಕ್ಕೆ ರೊಚ್ಚಿಗೆದ್ದ ಪ್ರಯಾಣಿಕರು ಕಲ್ಲು ಎಸೆದಿರುವ ಘಟನೆ ಇದಾಗಿದೆ. ಇದರಲ್ಲಿ ಯಾವುದೇ ಕೋಮುಕೋನವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್​ನಲ್ಲಿ ‘ಝಾನ್ಸಿ-ಪ್ರಯಾಗ್​ರಾಜ್-ಸ್ಪೆಷಲ್ ಟ್ರೈನ್-ಸ್ಟೋನ್’ ಎಂಬ ಕೀವರ್ಡ್ ಬಳಸಿ ಸರ್ಚ್ ಮಾಡಿದ್ದೇವೆ. ಆಗ NDTV ಜನವರಿ 28, 2025 ರಂದು ಒದೇ ವೈರಲ್ ವೀಡಿಯೊವನ್ನು ಹಂಚಿಕೊಂಡು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದಕ್ಕೆ ‘‘ಮಹಾಕುಂಭ ವಿಶೇಷ ರೈಲಿನ ಬಾಗಿಲುಗಳು ಲಾಕ್ ಆಗಿರುವುದನ್ನು ಕಂಡು ಪ್ರಯಾಣಿಕರು ಕಲ್ಲು ಎಸೆದಿದ್ದಾರೆ’’ ಎಂಬ ಹೆಡ್​ಲೈನ್​ ನೀಡಲಾಗಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಝಾನ್ಸಿಯಿಂದ ಪ್ರಯರಾಜ್‌ಗೆ ತೆರಳುತ್ತಿದ್ದ ವಿಶೇಷ ರೈಲಿಗೆ ಹರ್ಪಾಲ್‌ಪುರ ನಿಲ್ದಾಣದಲ್ಲಿ ಅನೇಕ ಜನರು ಕಾಯುತ್ತಿದ್ದರು. ರೈಲು ಬಂದು ನಿಂತಾಗ ಬಾಗಿಲು ಲಾಕ್‌ ಆಗಿರುವುದನ್ನು ಕಂಡು ಕಲ್ಲು ತೂರಾಟ ನಡೆಸಲಾಯಿತು. ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ರೈಲಿಗಾಗಿ ಕಾದು ಕುಳಿತಿದ್ದರು. ಆದರೆ ರೈಲು ಹತ್ತಲು ಯತ್ನಿಸಿದಾಗ ಬಾಗಿಲು ಹಾಕಿರುವುದು ಕಂಡು ಬಂತು. ಆಕ್ರೋಶಗೊಂಡ ಪ್ರಯಾಣಿಕರು ಹಿಂಸಾಚಾರಕ್ಕೆ ತಿರುಗಿ ಕಂಪಾರ್ಟ್‌ಮೆಂಟ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದರು’’ ಎಂದು ಬರೆಯಲಾಗಿದೆ.

ಹಾಗೆಯೆ ಟೈಮ್ಸ್ ಆಫ್ ಇಂಡಿಯಾ ಕೂಡ ಇದೇ ವೈರಲ್ ವೀಡಿಯೊದ ತುಣುಕೊಂದನ್ನು ಹಂಚಿಕೊಂಡು 28 ಜನವರಿ 2025 ರಂದು ‘‘ಮಧ್ಯಪ್ರದೇಶದಲ್ಲಿ ಮಹಾಕುಂಭಕ್ಕೆ ಕಿಕ್ಕಿರಿದು ಜನರನ್ನು ಸಾಗಿಸುತ್ತಿದ್ದ ರೈಲಿನ್ನು ಧ್ವಂಸಗೊಳಿಸಲಾಗಿದೆ’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ. ‘‘ಅಂಬೇಡ್ಕರ್ ನಗರ-ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಗ್‌ರಾಜ್‌ಗೆ ತೆರಳಲು ಕಾದುಕುಳಿತಿದ್ದ ಸ್ಥಳೀಯ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದ ರೈಲಿನ ಬಾಗಿಲು ತೆರೆಯದ ಕಾರಣ ಆಕ್ರೋಶಗೊಂಡು ಹರ್ಪಾಲ್‌ಪುರ ಮತ್ತು ಛತ್ತರ್‌ಪುರ ರೈಲು ನಿಲ್ದಾಣಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಬೆಳಗಿನ ಜಾವ 1 ರಿಂದ 1.30ರ ನಡುವೆ ಈ ಘಟನೆ ನಡೆದಿದೆ. ಮಹಾಕುಂಭದಲ್ಲಿ ಪಾಲ್ಗೊಳ್ಳಲು ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಜನರು ಸೇರಿದ್ದರು. ಆದರೆ, ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ರೈಲು ಬರುವಾಗಲೇ ಕಿಕ್ಕಿರಿದು ತುಂಬಿತ್ತು. ಸ್ಥಳಾವಕಾಶದ ಕೊರತೆಯಿಂದ ರೈಲಿನೊಳಗಿದ್ದ ಪ್ರಯಾಣಿಕರು ಬಾಗಿಲು ತೆರೆಯದ ಕಾರಣ ಸ್ಥಳೀಯ ಪ್ರಯಾಣಿಕರು ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿ ಧ್ವಂಸಗೊಳಿಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.

ಹರ್ಪಾಲ್‌ಪುರ ಪೊಲೀಸ್ ಠಾಣೆಯ ಪ್ರಭಾರಿ ಪುಷ್ಪಕ್ ಶರ್ಮಾ ಹೇಳಿಕೆಯನ್ನು TOI ಪ್ರಕಟಿಸಿದ್ದು, "ಪ್ಲಾಟ್‌ಫಾರ್ಮ್‌ನಲ್ಲಿ 7,000-8,000 ಜನರಿದ್ದರು. ಬಂದ ರೈಲಿನಲ್ಲಿ ಆಗಲೇ ಕಿಕ್ಕಿರಿದು ತುಂಬಿತ್ತು. ರೈಲಿನ ಡೋರ್ ತೆಗೆಯದ ಕಾರಣ ಕೆಲವು ಪ್ರಯಾಣಿಕರು ಕಲ್ಲು ಎಸೆಯಲು ಪ್ರಾರಂಭಿಸಿದರು. ನಾವು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದೇವೆ. ಗುಂಪನ್ನು ಚದುರಿಸಲಾಗಿದೆ. ಪರಿಸ್ಥಿತಿಯನ್ನು ನಿರ್ವಹಿಸಲು ಸುಮಾರು ಒಂದು ಗಂಟೆ ಬೇಕಾಯಿತು. ಅದರ ನಂತರ ರೈಲು ಸುರಕ್ಷಿತವಾಗಿ ಹೊರಟಿತು" ಎಂದು ಅವರು ಹೇಳಿದ್ದಾರೆ.

ಹರ್ಪಾಲ್‌ಪುರ ರೈಲ್ವೆ ನಿಲ್ದಾಣದಲ್ಲಿ ಮಹಾಕುಂಭದ ವಿಶೇಷ ರೈಲಿನ ಬಾಗಿಲುಗಳು ಲಾಕ್ ಆಗಿರುವುದನ್ನು ಕಂಡು ಪ್ರಯಾಣಿಕರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅನೇಕ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಇದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಓದಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಝಾನ್ಸಿಯಿಂದ ಪ್ರಯಾಗರಾಜ್‌ಗೆ ಪ್ರಯಾಣಿಸುತ್ತಿದ್ದ ವಿಶೇಷ ಮಹಾಕುಂಭ ರೈಲಿನ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ರೈಲಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದರಿಂದ ಪ್ಲಾಟ್​ಫಾರ್ಮ್​ಗೆ ರೈಲು ಬಂದಾಗ ಬಾಗಿಲು ತೆರೆಯಲಿಲ್ಲ. ಇದರಿಂದ ರೊಚ್ಚಿಗೆದ್ದ ಕಾದು ಕುಳಿತಿದ್ದ ಪ್ರಯಾಣಿಕರು ಕಲ್ಲು ಎಸೆದಿರುವ ಘಟನೆ ಇದಾಗಿದೆ. ಇದರಲ್ಲಿ ಯಾವುದೇ ಕೋಮುಕೋನವಿಲ್ಲ.

Claim Review:ಝಾನ್ಸಿಯಿಂದ ಪ್ರಯಾಗರಾಜ್‌ಗೆ ಪ್ರಯಾಣಿಸುತ್ತಿದ್ದ ವಿಶೇಷ ಮಹಾಕುಂಭ ರೈಲಿನ ಮೇಲೆ ಕಲ್ಲು ತೂರಾಟ ಮಾಡಿದ ಮುಸ್ಲಿಮರು.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ರೈಲಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದರಿಂದ ರೈಲಿನ ಡೋರ್ ತೆಗೆಯಲಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಕಲ್ಲು ಎಸೆದಿರುವ ಘಟನೆ ಇದಾಗಿದೆ. ಇದರಲ್ಲಿ ಯಾವುದೇ ಕೋಮುಕೋನವಿಲ್ಲ.
Next Story