Fact Check: ಇದು ದೀಪು ಚಂದ್ರ ದಾಸ್ ಅವರ ಕೊನೆಯ ಕ್ಷಣಗಳ ವೀಡಿಯೊ ಅಲ್ಲ, ಸತ್ಯ ಇಲ್ಲಿದೆ

ಕೆಲವು ಬಾಂಗ್ಲಾದೇಶದ ಪೊಲೀಸ್ ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಕಾಲರ್ ಹಿಡಿದು ಎಳೆದೊಯ್ಯುತ್ತಿರುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಾಂಗ್ಲಾದೇಶದ ಪೊಲೀಸರು ದೀಪು ಚಂದ್ರ ದಾಸ್ ಅವರನ್ನು ಅವರ ಸಾವಿಗೆ ಮುನ್ನ ಗಲಭೆಕೋರರಿಗೆ ಹಸ್ತಾಂತರಿಸುತ್ತಿರುವುದನ್ನು ತೋರಿಸಲಾಗುತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.

By -  Vinay Bhat
Published on : 25 Dec 2025 10:59 AM IST

Fact Check: ಇದು ದೀಪು ಚಂದ್ರ ದಾಸ್ ಅವರ ಕೊನೆಯ ಕ್ಷಣಗಳ ವೀಡಿಯೊ ಅಲ್ಲ, ಸತ್ಯ ಇಲ್ಲಿದೆ
Claim:ಇದು ದೀಪು ಚಂದ್ರ ದಾಸ್ ಅವರ ಕೊನೆಯ ಕ್ಷಣಗಳ ವೀಡಿಯೊ.
Fact:ಹಕ್ಕು ಸುಳ್ಳು. ಈ ವೀಡಿಯೊ ಹಳೆಯದು ಮತ್ತು ದೀಪು ದಾಸ್ ಅವರ ಮರಣಕ್ಕೂ ಮುಂಚೆಯೇ ಇಂಟರ್ನೆಟ್‌ನಲ್ಲಿತ್ತು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ವದಂತಿಗಳ ನಂತರ, ಡಿಸೆಂಬರ್ 18 ರಂದು ಮೈಮೆನ್ಸಿಂಗ್ ಜಿಲ್ಲೆಯ ಹೆದ್ದಾರಿಯಲ್ಲಿ ಬಾಂಗ್ಲಾದೇಶದ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರನ್ನು ಕ್ರೂರವಾಗಿ ಹೊಡೆದು ಕೊಂದು ಅವರ ದೇಹವನ್ನು ಸುಟ್ಟುಹಾಕಲಾಯಿತು. ದೇವದೂಷಣೆ ಆರೋಪವನ್ನು ಬೆಂಬಲಿಸಲು ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಪೊಲೀಸರು ಮತ್ತು RAB ಅಧಿಕಾರಿಗಳು ಹೇಳಿದ್ದಾರೆ. ತನಿಖೆ ಮುಂದುವರೆದಂತೆ ಹಲವಾರು ಆರೋಪಿಗಳನ್ನು ಬಂಧಿಸಿ ರಿಮಾಂಡ್‌ನಲ್ಲಿ ಇರಿಸಲಾಗಿದೆ.

ಈ ಘಟನೆಯ ನಂತರ, ಕೆಲವು ಬಾಂಗ್ಲಾದೇಶದ ಪೊಲೀಸ್ ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಕಾಲರ್ ಹಿಡಿದು ಎಳೆದೊಯ್ಯುತ್ತಿರುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಾಂಗ್ಲಾದೇಶದ ಪೊಲೀಸರು ದೀಪು ಚಂದ್ರ ದಾಸ್ ಅವರನ್ನು ಅವರ ಸಾವಿಗೆ ಮುನ್ನ ಗಲಭೆಕೋರರಿಗೆ ಹಸ್ತಾಂತರಿಸುತ್ತಿರುವುದನ್ನು ತೋರಿಸಲಾಗುತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ದೀಪು ಚಂದ್ರ ದಾಸ್ ಅವರ ಕೊನೆಯ ಕ್ಷಣಗಳ ವಿಡಿಯೋ. ನಾನು ಯಾರನ್ನೂ ಅವಮಾನಿಸಿಲ್ಲ ಎಂದು ಅವನು ಬೇಡಿಕೊಂಡರೂ ಪೊಲೀಸರು ಅವನನ್ನು ಗಲಭೆಕೋರರಿಗೆ ಒಪ್ಪಿಸುತ್ತಿದ್ದಾರೆ. ದೀಪು ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಸರ್, ದಯವಿಟ್ಟು ನನ್ನನ್ನು ಉಳಿಸಿ. ನಾನು ಇಸ್ಲಾಂ ಅಥವಾ ಮುಹಮ್ಮದ್ ಬಗ್ಗೆ ಏನನ್ನೂ ಹೇಳಲಿಲ್ಲ ಎಂದು ಬೇಡಿಕೊಳ್ಳುತ್ತಿದ್ದಾರೆ. ಇದರ ಹೊರತಾಗಿಯೂ, ಅವರನ್ನು ಜಿಹಾದಿ ಗುಂಪಿಗೆ ಒಪ್ಪಿಸಲಾಯಿತು. ಜಾಗೋ ಹಿಂದೂ ಜಾಗೋ..’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಹಳೆಯದು ಮತ್ತು ದೀಪು ದಾಸ್ ಅವರ ಮರಣಕ್ಕೂ ಮುಂಚೆಯೇ ಇಂಟರ್ನೆಟ್‌ನಲ್ಲಿತ್ತು.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ನವೆಂಬರ್ 18 ರಂದು ಪೋಸ್ಟ್ ಮಾಡಲಾದ ಬಾಂಗ್ಲಾದೇಶದ ಸುದ್ದಿ ಪೋರ್ಟಲ್ ಭೋರೆರ್ ಕಾಗೋಜ್ ಎಂಬ ಫೇಸ್‌ಬುಕ್ ಪುಟದಲ್ಲಿ ನಾವು ಇದೇ ವೈರಲ್ ವೀಡಿಯೊವನ್ನು ಕಂಡುಕೊಂಡೆವು. ವೀಡಿಯೊದ ಶೀರ್ಷಿಕೆ ಹೀಗಿದೆ, "ಈ ಢಾಕಾ ಕಾಲೇಜು ವಿದ್ಯಾರ್ಥಿಗೆ ಏನಾಯಿತು?".

ಡಿಸೆಂಬರ್ 18 ರಂದು ದಾಸ್ ಅವರನ್ನು ಕೊಲೆ ಮಾಡಲಾಗಿರುವುದರಿಂದ ಈ ವೀಡಿಯೊ ದೀಪು ದಾಸ್ ಅವರ ಸಾವಿಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ದಾಸ್ ಅವರ ಹತ್ಯೆಗೆ ಕನಿಷ್ಠ ಒಂದು ತಿಂಗಳ ಮೊದಲು ಈ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಇದೇ ಘಟನೆಯ ಮತ್ತೊಂದು ವೀಡಿಯೊವನ್ನು ನಾವು ಬೇರೆ ಕೋನದಿಂದ ರೆಕಾರ್ಡ್ ಮಾಡಿರುವುದು @dhakatoday_news ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಿದ್ದೇವೆ. ಈ ವೀಡಿಯೊಗೆ "ಪೊಲೀಸರು ಹೊಡೆದ ನಂತರ ಕಾಲೇಜು ವಿದ್ಯಾರ್ಥಿ ಅಳಲು ಪ್ರಾರಂಭಿಸುತ್ತಾನೆ" ಎಂದು ಶೀರ್ಷಿಕೆ ನೀಡಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಆ ವ್ಯಕ್ತಿಯನ್ನು ಬಿಟ್ಟು ಹೋಗುವುದನ್ನು ಕಾಣಬಹುದು. ಎರಡೂ ವೀಡಿಯೊಗಳಲ್ಲಿ, ಆ ವ್ಯಕ್ತಿ ಹಿಂಭಾಗದಲ್ಲಿ 'ಮೋಮಿನ್' ಎಂಬ ಹೆಸರನ್ನು ಮುದ್ರಿಸಿರುವ ಜೆರ್ಸಿಯನ್ನು ಧರಿಸಿದ್ದಾನೆ.

ಆ ವ್ಯಕ್ತಿ ಎಡಭಾಗದಲ್ಲಿ ಢಾಕಾ ಕಾಲೇಜಿನ ಲೋಗೋ ಮತ್ತು ಬಲಭಾಗದಲ್ಲಿ "ಅಧಿವೇಶನ 2022-23" ಎಂದು ಬರೆದಿರುವ ಟಿ-ಶರ್ಟ್ ಧರಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ. ಟಿ-ಶರ್ಟ್‌ನಲ್ಲಿ ಗೋಚರಿಸುವ ಲೋಗೋವನ್ನು ಅಧಿಕೃತ ಢಾಕಾ ಕಾಲೇಜಿನ ಲೋಗೋದೊಂದಿಗೆ ಹೋಲಿಸಿದಾಗ ಅವು ಒಂದೇ ಆಗಿವೆ ಎಂದು ಕಂಡುಬಂದಿದೆ. ಹೋಲಿಕೆಯನ್ನು ಕೆಳಗೆ ನೋಡಬಹುದು.

ಇಷ್ಟೇ ಅಲ್ಲದೆ ನಮ್ಮ ಹುಡುಕಾಟದ ಸಂದರ್ಭ ಡಿಸೆಂಬರ್ 22 ರಂದು ಬಾಂಗ್ಲಾದೇಶದಸತ್ಯ ಪರಿಶೀಲಕರೊಬ್ಬರು ಎಕ್ಸ್​ನಲ್ಲಿ ವೈರಲ್ ವೀಡಿಯೊವನ್ನು ಸುಳ್ಳು ಹಕ್ಕಿನೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಹೇಳಿ ಅದನ್ನು ತಳ್ಳಿಹಾಕಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಢಾಕಾ ಕಾಲೇಜು ವಿದ್ಯಾರ್ಥಿಯೊಬ್ಬನ ಹಳೆಯ, ಸಂಬಂಧವಿಲ್ಲದ ವೀಡಿಯೊವನ್ನು ಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಹತ್ಯೆಗೆ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಈ ವೀಡಿಯೊ ಹಳೆಯದು ಮತ್ತು ದೀಪು ದಾಸ್ ಅವರ ಮರಣಕ್ಕೂ ಮುಂಚೆಯೇ ಇಂಟರ್ನೆಟ್‌ನಲ್ಲಿತ್ತು.
Next Story