Fact Check: ಮಹಾಕುಂಭದ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿದ್ದಾರೆಂದು ತುಕಾಲಿ ಸಂತು-ಮಾನಸಾರ ಸಂಬಂಧವಿಲ್ಲದ ವೀಡಿಯೊ ವೈರಲ್

ಸ್ಯಾಂಡಲ್​ವುಡ್​ನ ಹಾಸ್ಯ ನಟ ತುಕಾಲಿ ಸಂತು ಹಾಗೂ ಮಾನಸಾ ತುಕಾಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಅಳುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವೀಡಿಯೊಕ್ಕೆ ‘ಪ್ರಯಾಗರಾಜ್ ಮಹಾ ಕುಂಭದಲ್ಲಿ ಸಿಲುಕಿರುವ ಜನರು ಅಳುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

By Vinay Bhat  Published on  14 Feb 2025 3:39 PM IST
Fact Check: ಮಹಾಕುಂಭದ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿದ್ದಾರೆಂದು ತುಕಾಲಿ ಸಂತು-ಮಾನಸಾರ ಸಂಬಂಧವಿಲ್ಲದ ವೀಡಿಯೊ ವೈರಲ್
Claim: ಮಹಾಕುಂಭ ಮೇಳದ ಟ್ರಾಫಿಕ್ನಲ್ಲಿ ಸಿಲುಕಿಕೊಂಡ ತುಕಾಲಿ ಸಂತು-ಮಾನಸಾ ದಂಪತಿಗಳು.
Fact: ಹಕ್ಕು ಸುಳ್ಳು. ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಮುಗಿದ ಬಳಿಕ ತುಕಾಲಿ ಸಂತು ಹಾಗೂ ಅವರ ಪತ್ನಿ ಸೆಟ್ನಿಂದ ಮನೆಗೆ ತೆರಳುತ್ತಿರುವ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದ ವೀಡಿಯೊ ಇದಾಗಿದೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮೊನ್ನೆಯಷ್ಟೆ 300 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು ಎನ್ನಲಾಗಿದೆ. ಕಿಲೋಮೀಟರ್‌ ಗಳಷ್ಟು ದೂರದಲ್ಲಿ ಮುಂದಕ್ಕೆ ಪ್ರಯಾಣ ಸಾಧ್ಯವಾಗದೆ ಭಕ್ತರು ದಿನಗಟ್ಟಲೆ ಟ್ರಾಫಿಕ್‌ ಜಾಮ್​ನಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ಸಿಎಂ ಯೋಗಿ ಆದಿತ್ಯನಾಥ್‌ ಟ್ರಾಫಿಕ್‌ ಸರಾಗವಾಗಿರೋಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ.

ಸ್ಯಾಂಡಲ್​ವುಡ್​ನ ಖ್ಯಾತ ಹಾಸ್ಯ ನಟ ತುಕಾಲಿ ಸಂತು (ಸಂತೋಷ್) ಹಾಗೂ ಅವರ ಪತ್ನಿ ಮಾನಸಾ ತುಕಾಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಅಳುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಜನರು ಕಾರನ್ನು ಸುತ್ತುವರೆದಿದ್ದು, ದಂಪತಿಗಳ ಮೇಲೆ ಕೂಗಾಡುತ್ತಿರುವುದು ಕಾಣಬಹುದು. ಈ ವೀಡಿಯೊಕ್ಕೆ ‘ಪ್ರಯಾಗರಾಜ್ ಮಹಾ ಕುಂಭದಲ್ಲಿ ಸಿಲುಕಿರುವ ಜನರು ಅಳುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ( ಆರ್ಕೈವ್ )

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಮಹಾಕುಂಭಕ್ಕೂ ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಮುಗಿದ ಬಳಿಕ ತುಕಾಲಿ ಸಂತು ಹಾಗೂ ಅವರ ಪತ್ನಿ ಸೆಟ್​ನಿಂದ ಮನೆಗೆ ತೆರಳುತ್ತಿರುವ ವೇಳೆ ಅವರ ಅಭಿಮಾನಿಗಳು ಕಾರಿಗೆ ಸುತ್ತುವರಿದ ವೀಡಿಯೊ ಇದಾಗಿದೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಸುಮನ್ ಟಿವಿ ಎಂದು ಬರೆದಿರುವುದು ವಾಟರ್‌ಮಾರ್ಕ್ ಮತ್ತು ಲೋಗೋ ಇರುವುದನ್ನು ನಾವು ಗಮನಿಸಿದ್ದೇವೆ. ಇದರಿಂದ ಒಂದು ಸುಳಿವು ಪಡೆದುಕೊಂಡು ನಾವು ಸುಮನ್ಟಿವಿಯ ಸಾಮಾಜಿಕ ಖಾತೆಯಲ್ಲಿ ಪರಿಶೀಲಿಸಿದ್ದೇವೆ. ಆಗ ಜನವರಿ 27, 2025 ರಂದು ಇದೇ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವುದು ಕಂಡುಕೊಂಡಿದೆ. ಶೀರ್ಷಿಕೆಯಲ್ಲಿ ‘#thukalisantosh’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಉಲ್ಲೇಖಿಸಲಾಗಿದೆ.

ನಾವು ವೈರಲ್ ವೀಡಿಯೊವನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದಾಗ ವೈರಲ್ ವೀಡಿಯೊದಲ್ಲಿನ ಸ್ಕ್ರೀನ್ ಶಾಟ್ ಬಳಸಿಕೊಂಡು ವಿಜಯ ಕರ್ನಾಟಕ ಜನವರಿ 31, 2025 ರಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಬಿಗ್ ಬಾಸ್ ಕನ್ನಡ 11 ಫಿನಾಲೆ ಮುಗಿಸಿ ವಾಪಸ್ ಬರುವಾಗ ತುಕಾಲಿ ಸಂತು ದಂಪತಿ ಇದ್ದ ಕಾರಿಗೆ ಮುತ್ತಿಗೆ ಹಾಕಲಾಯಿತು ಎಂದು ವದಂತಿ ಹಬ್ಬಿತ್ತು ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ಫಿನಾಲೆ ಹಿನ್ನೆಲೆಯಲ್ಲಿ ಅಲ್ಲಿ ತುಂಬ ಜನ ಬಂದಿದ್ದರು. ನಾನು ಕೂಡ ಅದೇ ಸಮಯಕ್ಕೆ ಮಾನಸಾ ಜೊತೆ ಕಾರಲ್ಲಿ ಹೊರಗೆ ಬಂದೆ. ಎಲ್ಲರೂ ಸುತ್ತುವರೆದರು. ಅವರೆಲ್ಲರೂ ಒಂದೇ ಒಂದು ಸೆಲ್ಫೀ ಕೊಡಿ ಅಂತ ಕೇಳಿದರು. ನಾವು ಇಳಿದು ಅವರಿಗೆ ಸೆಲ್ಫೀ ಕೋಡೋಣ ಅಂದರೆ ಎಲ್ಲ ಕಡೆನೂ ಜನ ಮುತ್ತಿಕೊಂಡಿದ್ದರು. ಚೂರು ಕಾರು ಹಿಂದೆ ಮುಂದೆ ಹೋದರೆ ಯಾರಿಗಾದರೂ ನೋವಾಗಬಹುದು ಎಂಬ ಆತಂಕ ನಮ್ಮಲ್ಲಿತ್ತು. ಆ ಒಂದು ಗಾಬರಿಯಲ್ಲಿ ಮಾತ್ರ ನಾವು ಇದ್ದೆವೆ" ಎಂದು ಸಂತು ಹೇಳಿಕೆಯನ್ನು ವಿಜಯ ಕರ್ನಾಟಕ ಪ್ರಕಟಿಸಿದೆ.

ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ತುಕಾಲಿ ಸಂತೋಷ್ ಅವರನ್ನು ಸಂಪರ್ಕಿಸಿದ್ದೇವೆ. ಈ ವೈರಲ್ ವೀಡಿಯೊವನ್ನು ಕಳಿಸಿ ಕೇಳಿದಾಗ, ಇದು ಬಿಗ್ ಬಾಸ್ 11 ಫಿನಾಲೆ ರಾತ್ರಿ ನಡೆದ ಘಟನೆ. ನಾನು ಮತ್ತು ಮಾನಸಾ ಶೋ ಮುಗಿಸಿ ಸೆಟ್​ನಿಂದ ಮನೆಗೆ ಹಿಂತಿರುಗುವಾಗ ಫ್ಯಾನ್ಸ್ ಸೆಲ್ಫಿಗೆಂದು ಮುಗಿಬಿದ್ದರು. ನಾವು ಮಹಾಕುಂಭ ಮೇಳಕ್ಕೆ ಹೋಗೇ ಇಲ್ಲ ಎಂದು ನ್ಯೂಸ್ ಮೀಟರ್​ಗೆ ಖಚಿತ ಪಡಿಸಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಜನಸಮೂಹದಿಂದ ಸುತ್ತುವರೆದಿರುವ ನಟ ತುಕಾಲಿ ಸಂತೋಷ್ ಮತ್ತು ಅವರ ಪತ್ನಿ ಮಾನಸಾ ಅವರ ವೈರಲ್ ವೀಡಿಯೊವನ್ನು 2025 ರ ಮಹಾ ಕುಂಭಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ನಾವು ಸ್ಪಷ್ಟವಾಗಿ ಹೇಳುತ್ತೇವೆ.

Claim Review:ಮಹಾಕುಂಭ ಮೇಳದ ಟ್ರಾಫಿಕ್ನಲ್ಲಿ ಸಿಲುಕಿಕೊಂಡ ತುಕಾಲಿ ಸಂತು-ಮಾನಸಾ ದಂಪತಿಗಳು.
Claimed By:Instagram User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ಮುಗಿದ ಬಳಿಕ ತುಕಾಲಿ ಸಂತು ಹಾಗೂ ಅವರ ಪತ್ನಿ ಸೆಟ್ನಿಂದ ಮನೆಗೆ ತೆರಳುತ್ತಿರುವ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದ ವೀಡಿಯೊ ಇದಾಗಿದೆ.
Next Story