Fact Check: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಡಿಕೆ ಶಿವಕುಮಾರ್ ಅವರು ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಬೆಂಬಲ ಯಾಚಿಸಿದರೇ?

ಇಂಡಿಯಾ ಒಕ್ಕೂಟವನ್ನು ಅಧಿಕಾರಕ್ಕೆ ತರಲು ಬೆಂಬಲ ಕೋರಿ ಡಿಕೆ ಶಿವಕುಮಾರ್ ಅವರು ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಒಂದು ಹರಿದಾಡುತ್ತಿದೆ.

By Newsmeter Network  Published on  5 Jun 2024 12:54 PM GMT
Fact Check: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಡಿಕೆ ಶಿವಕುಮಾರ್ ಅವರು ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಬೆಂಬಲ ಯಾಚಿಸಿದರೇ?
Claim: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಡಿಕೆ ಶಿವಕುಮಾರ್ ಅವರು ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಬೆಂಬಲ ಯಾಚಿಸಿದ್ದಾರೆ.
Fact: ಇದು ಚುನಾವಣಾ ಫಲಿತಾಂಶದ ಬಳಿಕ ನಡೆದ ಭೇಟಿಯಲ್ಲ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಉಭಯ ನಾಯಕರು ಆಕಸ್ಮಿಕವಾಗಿ ಮುಖಾಮುಖಿಯಾದಾಗ ನಡೆದ ಭೇಟಿ.

ಹೈದರಾಬಾದ್: ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇಂಡಿಯಾ ಒಕ್ಕೂಟಕ್ಕೆ ಬೆಂಬಲ ನೀಡುವ ಸಲುವಾಗಿ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದಾರೆ ಎಂದು

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.

53 ಸೆಕೆಂಡುಗಳ ಒಂದು ವಿಡಿಯೋ ಒಂದನ್ನು ಹಂಚಿ ರಾಧಾ ಅವಿನಾಶ್ ಎಂಬ X ಖಾತೆದಾರರೊಬ್ಬರು "ರಾಹುಲ್ ಪ್ರಧಾನಿಯಾಗೋಕೆ, ಯಶಸ್ವಿ ಒಂದು ಚಿನ್ನದ ಹಕ್ಕಿಯನ್ನ ಬೇಟೆಯಾಡಿದ ಡಿಕೆಶಿ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. (Archive)

ಇದೇ ರೀತಿ ಇನ್ನೊಂದು X ಖಾತೆಯಲ್ಲೂ ಪೋಸ್ಟ್ ಒಂದನ್ನು ಹಂಚಲಾಗಿದೆ. (Archive)



Fact Check

ನಾವು ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋಧಿಸಿದಾಗ ಇದು ಆರು ತಿಂಗಳ ಹಿಂದಿನ ವಿಡಿಯೋ ಎಂದು ತಿಳಿದುಬಂದಿದೆ. ರಿವರ್ಸ್ ಇಮೇಜ್ ಹುಡಕಾಟ ನಡೆಸಿದಾಗ NDTV ಯಲ್ಲಿ 2023 ಡಿಸೆಂಬರ್ 29 ರಂದು ಪ್ರಕಟಿಸಲಾದ ವರದಿಯು ನಮಗೆ ದೊರಕಿತು. ಡಿಸೆಂಬರ್ 28, ಗುರುವಾರದಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಬ್ಬರು ನಾಯಕರು ಆಕಸ್ಮಿಕವಾಗಿ ಮುಖಾಮುಖಿಯಾದಾಗ ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಅಂದು ಈ ಭೇಟಿಯು ಊಹಾಪೋಹಗಳನ್ನು ಸೃಷ್ಟಿಸಿದಾಗ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಅವರು "ಇದು ಆಕಸ್ಮಿಕ ಭೇಟಿ, ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ" ಎಂದು ಸ್ಪಷ್ಟಪಡಿಸಿದ್ದರು.

The New Indian Express ನಲ್ಲೂ ನಾಯ್ಡು ಮತ್ತು ಡಿಕೆಶಿ ಭೇಟಿ ಬಗ್ಗೆ ವರದಿ ಮಾಡಲಾಗಿತ್ತು. "ಕುತೂಹಲ ಮೂಡಿಸಿದ ನಾಯ್ಡು ಮತ್ತು ಡಿಕೆಎಸ್ ಭೇಟಿ" ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ.

Live Hindustan ಎಂಬ ಯೂಟ್ಯೂಬ್ ಚಾನಲ್ ನಲ್ಲಿ 2023 ಡಿಸೆಂಬರ್ 30 ರಂದು ಅಪ್ಲೋಡ್ ಮಾಡಲಾದ ವೀಡಿಯೋದಲ್ಲಿ ಉಭಯ ನಾಯಕರ ಭೇಟಿಯ ಬಗ್ಗೆ ವರದಿ ಮಾಡಲಾಗಿದೆ.



ಆದ್ದರಿಂದ ಇಬ್ಬರು ನಾಯಕರು ಫಲಿತಾಂಶ ಪ್ರಕಟವಾದ ಬಳಿಕ ಭೇಟಿಯಾಗಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸುದ್ದಿ. ಅದು 2023 ಡಿಸೆಂಬರ್ 28ರಂದು ಬೆಂಗಳೂರು ಏರ್ಪೋರ್ಟ್ ನಲ್ಲಿ ಆಕಸ್ಮಿಕವಾಗಿ ನಡೆದ ಭೇಟಿಯಾಗಿದೆ ಎಂದು ಈ ಮೂಲಕ ನಾವು ತೀರ್ಮಾನಕ್ಕೆ ಬಂದಿದ್ದೇವೆ.

ಜೂನ್ 4ರಂದು ಪ್ರಕಟವಾದ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಬಿಹಾರದ ನಿತೀಶ್ ಕುಮಾರ್ ಮತ್ತು ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಅವರ ಚಲನ ವಲನ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಚುನಾವಣಾ ಸಂದರ್ಭದಲ್ಲಿ ಎನ್‌ಡಿಎ ಪಾಲುದಾರನಾಗಿದ್ದ ನಾಯ್ಡು ಇಂಡಿಯಾ ಒಕ್ಕೂಟ ಸೇರಬಹುದು ಎಂದು ಊಹಿಸಲಾಗಿತ್ತು. ಆದರೆ ಚಂದ್ರಬಾಬು ನಾಯ್ಡು ಅವರು ಇದನ್ನು ಅಲ್ಲಗಳೆದಿದ್ದಾರೆ. "ನಾವು ಎನ್‌ಡಿಎ ಭಾಗವಾಗಿ ಇರುತ್ತೇವೆ" ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾಯ್ಡು ಅವರ ಪಕ್ಷ 16 ಸ್ಥಾನಗಳನ್ನು ಗೆದ್ದಿದೆ.


Claim Review:ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಡಿಕೆ ಶಿವಕುಮಾರ್ ಅವರು ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಬೆಂಬಲ ಯಾಚಿಸಿದ್ದಾರೆ.
Claimed By:Social Media User
Claim Reviewed By:NewsMeter
Claim Source:X
Claim Fact Check:False
Fact:ಇದು ಚುನಾವಣಾ ಫಲಿತಾಂಶದ ಬಳಿಕ ನಡೆದ ಭೇಟಿಯಲ್ಲ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಉಭಯ ನಾಯಕರು ಆಕಸ್ಮಿಕವಾಗಿ ಮುಖಾಮುಖಿಯಾದಾಗ ನಡೆದ ಭೇಟಿ.
Next Story