ಬಿಎಲ್ ಸಂತೋಷ್ ಲಿಂಗಾಯತರ ಮತ ಕರ್ನಾಟಕದಲ್ಲಿ ಬೇಕಿಲ್ಲ ಎಂದಿರುವಂತೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ

False allegation against BJP National Secretary Organisation BL Santhosh as he gave statement against Lingayat community and BS Yediyurappa

By Srinivasa Mata  Published on  5 May 2023 4:13 PM GMT
ಬಿಎಲ್ ಸಂತೋಷ್ ಲಿಂಗಾಯತರ ಮತ ಕರ್ನಾಟಕದಲ್ಲಿ ಬೇಕಿಲ್ಲ ಎಂದಿರುವಂತೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ

ಹೈದರಾಬಾದ್: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರು ಖಾಸಗಿ ಹೋಟೆಲ್ ನಲ್ಲಿ ಮಾತನಾಡುತ್ತಾ, ಬಿಜೆಪಿಯನ್ನು ಕಟ್ಟಿರುವುದು ಹಿಂದುತ್ವದ ಆಧಾರದ ಮೇಲೆ ವಿನಾ ಯಾವುದೋ ನಾಯಕನ ಜಾತಿಯ ಮೇಲಲ್ಲ. ಬಿಜೆಪಿಯ ಕಾರ್ಯಕರ್ತರು ಹಿಂದುತ್ವದ ಮೇಲೆ ನಂಬಿಕೆ ಇಡಬೇಕೆ ಹೊರತು ಯಾವುದೋ ವ್ಯಕ್ತಿಯ ಮೇಲಲ್ಲ ಎಂದಿದ್ದಾರೆ. ನಮಗೆ ಲಿಂಗಾಯತರ ಮತಗಳು ಅಗತ್ಯ ಇಲ್ಲ ಎಂದು ಅನೇಕ ಬಾರಿ ಹೇಳಿದ್ದೇನೆ, ಈಗಲೂ ಅದನ್ನೇ ಹೇಳುತ್ತೇನೆ. ಇಲ್ಲಿ ಯಾರೂ ಚಿರಂಜೀವಿಗಳಲ್ಲ ಎಂದು ಪರೋಕ್ಷವಾಗಿ ಬಿಎಸ್ ವೈ ಅವರ ಹೆಸರನ್ನು ಹೇಳದೆ ವ್ಯಂಗ್ಯವಾಡಿದರು. ಈ ಮಾತಿಗೆ ಹುಬ್ಬಳ್ಳಿ, ಧಾರವಾಡ, ಮೈಸೂರು, ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕಾರ್ಯಕರ್ತರು ಸಭೆಯಿಂದ ಹೊರ ನಡೆದರು ಎಂದು ವರದಿ ಇರುವ ಪತ್ರಿಕೆಯ ತುಂಡೊಂದು ಹರಿದಾಡುತ್ತಿದೆ. ಅದರ ಶೀರ್ಷಿಕೆ: ನಾವು ಹಿಂದುತ್ವದಲ್ಲಿ ಮುಂದುವರಿಯುತ್ತೇವೆ, ಲಿಂಗಾಯತರ ಅಗತ್ಯವಿಲ್ಲ: ಬಿ.ಎಲ್. ಸಂತೋಷ್ ಎಂದಿದೆ.

ಅಷ್ಟೇ ಅಲ್ಲ, ಬೆಂಗಳೂರು ಒನ್ ಹೆಸರಿನ ಚಾನೆಲ್ ನಲ್ಲಿ ಸಹ ಈ ಬಗ್ಗೆ ವರದಿ ಆಗಿದ್ದು, ವರದಿ ಪ್ರಸಾರದ ಜತೆಜತೆಗೆ ಸಂತೋಷ್ ಅವರು ಇರುವಂಥ ಯಾವುದೋ ಹಳೇ ವಿಡಿಯೋ ಹಿನ್ನೆಲೆಯಲ್ಲಿ ಬರುತ್ತದೆಯೇ ವಿನಾ ಈ ರೀತಿ ಮಾತನಾಡಿರುವಂಥ ಯಾವುದೇ ವಿಡಿಯೋ ತುಣಕು ಪ್ರಸಾರ ಮಾಡಿಲ್ಲ. ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ಮಾಡಿರುವಂತೆ ಈ ರೀತಿಯ ಯಾವುದೇ ಹೇಳಿಕೆಯನ್ನು ಬಿ.ಎಲ್. ಸಂತೋಷ್ ನೀಡಿಲ್ಲ.




Factcheck

ಬಿ.ಎಲ್. ಸಂತೋಷ್ ಲಿಂಗಾಯತ ಸಮುದಾಯದವರ ವಿರುದ್ಧ ಮಾತನಾಡಿದರು ಎಂದು ವರದಿ ಆಗಿರುವಂತೆ ಹಂಚಿಕೆ ಆಗುತ್ತಿರುವ ಪತ್ರಿಕೆ ಯಾವುದು ಎಂಬುದು ತಿಳಿಯುವುದೇ ಇಲ್ಲ. ಇನ್ನು ಖಾಸಗಿ ಹೋಟೆಲ್ ನಲ್ಲಿ ಸಭೆ ಯಾವ ದಿನಾಂಕ, ವಾರದಂದು ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅದೇ ರೀತಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಹೇಳದೆ ವ್ಯಂಗ್ಯವಾಡಿದರು ಎಂದು ಒಂದು ಪ್ಯಾರಾದಲ್ಲಿ ಇದ್ದರೆ, ಅದರ ಮುಂದಿನ ಪ್ಯಾರಾದಲ್ಲಿ ಅವರ ಇಬ್ಬರು ಮಕ್ಕಳನ್ನು ಬೆಳೆಸಿದರೆ ಒಂದೇ ಸಮುದಾಯ ಬೆಳೆಯುತ್ತದೆ ಹೊರತು ಪಕ್ಷ ಬೆಳೆಯುವುದಿಲ್ಲ ಎಂದು ಕಾರ್ಯಕರ್ತರ ಮೇಲೆ ಕಿಡಿ ಕಾರಿದರು ಎಂದು ಇದೆ. ಬಿಎಸ್ ವೈ ಹೆಸರು ಹೇಳದೆ ವ್ಯಂಗ್ಯವಾಡಿದರು ಎಂದಿರುವ ವರದಿಯಲ್ಲಿ ಅವರ ಇಬ್ಬರು ಮಕ್ಕಳು ಎಂದು ಯಾಕೆ ಹೇಳುತ್ತಾರೆ? ಇನ್ನು ಈ ಪತ್ರಿಕೆ ಯಾವುದು ಎಂಬುದೇ ಇಲ್ಲ. ಎರಡೂ ಪ್ಯಾರಾ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಇದೆ. ಇನ್ನು ಫೋಟೋದಲ್ಲಿ ಇರುವಂಥ ಇತರರು ಯಾರು ಎಂಬ ಶೀರ್ಷಿಕೆ ಸಹ ಇಲ್ಲ.




ಇನ್ನು ಬೆಂಗಳೂರು ಒನ್ ಚಾನೆಲ್ ವರದಿ ಮಾಡುತ್ತಾ ಹಿನ್ನೆಲೆಯಲ್ಲಿ ಸಂತೋಷ್ ಅವರು ಮಾತನಾಡುವಂಥ ವಿಡಿಯೋ ಪ್ಲೇ ಆಗಿದೆ. ಆದರೆ ಅದು ಅವರ ಹೇಳಿಕೆಯನ್ನು ಒಳಗೊಂಡಂಥ ವಿಡಿಯೋ ಅಲ್ಲ. ಈ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದರಿಂದ ಮೈಸೂರು ಮಹಾನಗರದ ವಕ್ತಾರರಾದ ಎಂ.ಎ. ಮೋಹನ್ ಎಂಬುವವರು ದಿಲೀಪ್ ಗೌಡ ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವಂತೆ ಸಂತೋಷ್ ಅವರು ಹೇಳಿಲ್ಲ ಎಂದು ದೃಢೀಕರಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೇಸ್ ಬುಕ್ ಪೋಸ್ಟ್ ಮಾಡಿದವರ ವಿರುದ್ಧ ಚುನಾವಣಾಧಿಕಾರಿಗಳು ಮತ್ತು ಸೈಬರ್ ಕ್ರೈಮ್ ಠಾಣೆಯಲ್ಲಿ ಈಗಾಗಲೇ ದೂರನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.




ಇದೇ ವಿಚಾರವಾಗಿ ಬಿಜೆಪಿ ಕಡೆಯಿಂದ ಪ್ರತಿಕ್ರಿಯೆ ಪಡೆಯುವುದಕ್ಕೆ ನ್ಯೂಸ್ ಮೀಟರ್ ನಿಂದ ಪ್ರಯತ್ನಿಸಲಾಯಿತು. ನಕಲಿ ಸುದ್ದಿಗೆ ಸ್ಪಷ್ಟನೆ ನೀಡುವ ಅಗತ್ಯ ಇಲ್ಲ. ಆದ್ದರಿಂದ ಈ ಬಗ್ಗೆ ಮಾತನಾಡಿ, ಸುಳ್ಳು ಸುದ್ದಿಗೆ ಇನ್ನಷ್ಟು ಪ್ರಾಮುಖ್ಯ ನೀಡುವುದಿಲ್ಲ ಎಂದು ಹೇಳಲಾಯಿತು.

Conclusion

ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿ ಎನ್ನಲಾದದ್ದು ಯಾವ ಮಾಧ್ಯಮದಲ್ಲಿ ಎಂಬ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ದಿನಾಂಕ, ವಾರ ಯಾವುದು ಎಂಬುದು ಇಲ್ಲ. ಇನ್ನು ಟೀವಿ ಚಾನೆಲ್ ನಲ್ಲಿ ಪ್ರಸಾರ ಮಾಡಿರುವ ವರದಿಯಲ್ಲೂ ಸಂತೋಷ್ ಅವರು ಮಾತನಾಡಿರುವುದು ಎಂಬುದಕ್ಕೆ ಸಾಕ್ಷಿಯಾಗಿ ಯಾವುದೇ ವಿಡಿಯೋ ಕ್ಲಿಪ್ ಇಲ್ಲ. ಜತೆಗೆ ಈಗ ಈ ಬಗ್ಗೆ ಸೈಬರ್ ಕ್ರೈಮ್ ಮತ್ತು ಚುನಾವಣಾಧಿಕಾರಿಗಳಿಗೂ ದೂರು ನೀಡಲಾಗಿದೆ. ಆದ್ದರಿಂದ ಬಿ.ಎಲ್. ಸಂತೋಷ್ ಅವರು ಲಿಂಗಾಯತರ ಮತ ಬಿಜೆಪಿಗೆ ಬೇಕಿಲ್ಲ ಎಂದಿರುವುದು ಸುಳ್ಳು ಎಂಬುದು ಖಾತ್ರಿ ಆಗುತ್ತದೆ.



Claim Review:False allegation against BJP National Secretary Organisation BL Santhosh as he gave statement against Lingayat community and BS Yediyurappa
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story